ಭಾನುವಾರ, ಜನವರಿ 12, 2025
ಪೂಜ್ಯ.ಶ್ರೀ ಕರುಣಾದೇವಿ ಮಾತಾ
ಕವಯತ್ರಿ ಹಾಗೂ ಮಾತಾಜಿಯವರಾದ ಪೂಜ್ಯ ಶ್ರೀ ಕರುಣಾದೇವಿಯವರು. ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರು (ಹೆಚ್) ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಹಿಪ್ಪಳಗಿಮಠ ಮತ್ತು ಶರಣಮ್ಮನವರ ಉದರದಲ್ಲಿ ದಿನಾಂಕ ೨೨-೨-೧೯೬೧ರಲ್ಲಿ ಜನ್ಮ ತಳೆದಿದ್ದಾರೆ. ಬಿ.ಎ.ಪದವಿಧರರಾದ ಇವರು ಅಪಾರ ಅಧ್ಯಾತ್ಮಿಕ ಪಾಂಡಿತ್ಯವನ್ನು ಹೊಂದಿ, ವೈರಾಗ್ಯ ಜೀವನದೊಂದಿಗೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ, ಹಿಂದಿ, ಮರಾಠಿ, ತೆಲುಗು ಚರ್ತುಭಾಷಾ ಪರಿಣಿತರಾದ ಇವರು ಆ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಶರಣರ ಶ್ರೀಶೈಲ್', `ಶ್ರೀ ಗಿರಿ ಅಕ್ಕಮಹಾದೇವಿ ಪ್ರಾರ್ಥನೆ' (ಕವನ ಸಂಕಲನಗಳು) `ಚಿದ್ಘನ್ ಚೆನ್ನಬಸವಣ್ಣ ನವರ ವಚನೇತರ ಸಾಹಿತ್ಯ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಶ್ರೀ ಗಿರಿ ಅಕ್ಕಮಹಾದೇವಿ ಪ್ರಾರ್ಥನೆ' ಎಂಬ ಕೃತಿ ಚಂದ್ರ ಶೇಖರ ರೆಡ್ಡಿ ಎಂಬುವವರು ತೆಲುಗು ಭಾಷೆಗೆ ಅನುವಾದಿಸಿದ್ದಾರೆ. ಇವರು ಬರೆದ ಅನೇಕ ಹಾಡುಗಳು ಸಿ.ಡಿ.ರೂಪದಲ್ಲಿ ಧ್ವನಿ ಮುದ್ರಿತಗೊಂಡಿವೆ. ಅವುಗಳಲ್ಲಿ `ತೊಗಲಿಲ್ಲದ ಘನ, `ಶಿವನೇ ಬಸವಣ್ಣನ ನಾದ, `ಸಿದ್ದರಾಮೇಶ್ವರ ವಚನಗಳು, `ಶ್ರೀ ಗಿರಿ ಅಕ್ಕಮಹಾದೇವಿ' (ಕನ್ನಡ ಸಿಡಿಗಳು) `ಬಸವವಾಣಿ' (ಮರಾಠಿ) `ಬ್ರಹ್ಮಾನಂದ ಭಜನ' (ಹಿಂದಿ) `ಶ್ರೀ ಅಕ್ಕ ಮಹಾದೇವಿ ವಚನಾಲು' (ತೆಲುಗಿ) ಎಂಬ ಸಿ.ಡಿ.ಗಳು.ರಚನೆಯಾಗಿವೆ. ಇವರ ವೈರಾಗ್ಯ ಜೀವನದ ಕುರಿತು ಡಾ.ನೀಲಮ್ಮ ಕನ್ನಳ್ಳಿಯವರು ಲೇಖನಗಳು ಬರೆದಿದ್ದಾರೆ. ಸದ್ಯ ಮಾತಾಜಿಯವರು ಶ್ರೀಶೈಲದ ಶ್ರೀ ಅಕ್ಕ ಮಹಾದೇವಿ ಚೈತನ್ಯ ಕೇಂದ್ರದ ಮಹಾತಪಸ್ವಿನಿಯಾಗಿ ಅಧ್ಯಾತ್ಮಿಕ ಜೀವನದಲ್ಲಿ ಅಪಾರ ಪಾಂಡಿತ್ಯ ಹೊಂದಿ ವಚನ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ. ಇವರು ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಖ್ಯಾತಿಯನ್ನು ಪಡೆದು `ಮಹಾ ತಪಸ್ವಿನಿ, `ಅಭಿನವ ಅಕ್ಕ' ಮತ್ತು ಅಧ್ಯಾತ್ಮಿಕ ಕೋಗಿಲೆ ಎಂಬ ಬಿರುದುಗಳಿಗೆ ಪಾತ್ರರಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ