ಹೊರ ರಾಜ್ಯಗಳಿಂದ ಬೀದರಿಗೆ ಬಂದ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಹೊರ ರಾಜ್ಯಗಳಿಂದ ಬೀದರಿಗೆ ಬಂದ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಸೋಮವಾರ, ಜನವರಿ 13, 2025
ಪರಮ.ಪೂಜ್ಯ. ಶ್ರೀ. ಡಾ.ಈಶ್ವರಾನಂದ ಸ್ವಾಮಿಜಿ
ಸಾಹಿತಿಗಳಾದ ಪ. ಪೂಜ್ಯ. ಶ್ರೀ. ಡಾ.ಈಶ್ವರಾನಂದ ಸ್ವಾಮಿಜಿಯವರು ಮೂಲತಃ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲ್ಲೂಕಿನ ಸಲಗರ ಗ್ರಾಮದ ಶ್ರೀ ಸಿದ್ರಾಮಪ್ಪಾ ಮತ್ತು ಶ್ರೀಮತಿ ಮಹಾದೇವಿ ದಂಪತಿಗಳ ಉದರದಲ್ಲಿ ದಿನಾಂಕ ೭-೮-೧೯೭೮ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ಯಿಂದ ಸಂಸ್ಕೃತದಲ್ಲಿ ಅಧ್ಯಯನ ಮಾಡಿದ ಇವರು ಎಂ.ಎ. ಪಿ.ಎಚ್.ಡಿ ಪದವಿಧರರು. `ದಶೋಪನಿಷತ್ತು ಮತ್ತು ದೇವರ ದಾಸಿಮಯ್ಯನವರ ವಚನಗಳ ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ. ಪ.ಪೂಜ್ಯ. ಶ್ರೀ. ಸದಾನಂದ ಮಹಾಸ್ವಾಮಿಗಳು ಇವರ ಗುರುಗಳಾಗಿದ್ದು ೧೯೮೭ರಲ್ಲಿ ಬಸವಕಲ್ಯಾಣ ತಾಲೂಕಿನ ಸಸ್ತಾಪೂರಕ್ಕೆ ಆಗಮಿಸಿ, ಇಲ್ಲಿ ಸದ್ಗುರು ಶರಣ ಶಿವಲಿಂಗೇಶ್ವರ ಮಠ ಸ್ಥಾಪಿಸಿದರು. ಶ್ರೀಗಳು ಸಸ್ತಾಪೂರ ಮತ್ತು ಸುರಪುರ ತಾಲೂಕಿನ ಮುದೆನೂರು ಮಠಗಳ ಪೀಠಾಧ್ಯಕ್ಷರಾಗಿದ್ದು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದು, ಕನ್ನಡ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೧೦ರಲ್ಲಿ `ವಚನ ಸಾಹಿತ್ಯದ ಸಾರ್ವಭೌಮ ದೇವರ ದಾಸಿಮಯ್ಯ', ಮತ್ತು ೨೦೧೪ರಲ್ಲಿ `ದಶೋಪನಿಷತ್ತು ಮತ್ತು ದೇವರ ದಾಸಿಮಯ್ಯನವರ ವಚನಗಳ ಒಂದು ಅಧ್ಯಯನ' (ಸಂಶೋಧನೆ) ೨೦೧೫ರಲ್ಲಿ `ರಮೇಶ ಬಾಬು ಯಾಳಗಿಯವರ ಕೃತಿಗಳ ವಿಮರ್ಶೇ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಗುರುನಾಥ ಗಡ್ಡೆ
ಸಾಹಿತಿ, ಪತ್ರಕರ್ತ, ಸಂಪಾದಕರಾಗಿ ಬಹುಕಾಲ ಗುರ್ತಿಸಿಕೊಂಡ ಲೇಖಕರೆಂದರೆ ಗುರುನಾಥ ಗಡ್ಡೆಯವರು. ಇವರು ಮೂಲತಃ ತೆಲಂಗಾಣದವರಾಗಿದ್ದು ಅಣ್ಣೆಪ್ಪ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೩-೪-೧೯೬೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಬಸವಕಲ್ಯಾಣದ ಎಸ್.ಎಸ್.ಕೆ.ಬಿ. (ಜೆಓಸಿ) ಕಾಲೇಜಿನ ಪ್ರಾಯೋಗಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬಾಲ್ಯದಿಂದಲೂ ಕವನ, ಲೇಖನ, ಬರಹಗಳು ಬರೆದು ಪತ್ರಕರ್ತರಾಗಿ ಹೆಚ್ಚು ಚಿರಪರಿಚಿತರು. ಬಸವಕಲ್ಯಾಣದಲ್ಲಿ `ಬಹಿರಂಗ ಸುದ್ದಿ’ ಎಂಬ ಕನ್ನಡ ದಿನಪತ್ರಿಕೆ ತೆಗೆದು ೩೦ವರ್ಷ ಕ್ಕಿಂತಲೂ ಹೆಚ್ಚು ಕಾಲ ಪತ್ರಕಾ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿ ಹಲವಾರು ಸಾಹಿತ್ಯಿಕ ಕೃತಿಗಳು ಹೊರತಂದಿದ್ದಾರೆ. ೧೯೮೬ರಲ್ಲಿ `ಶರಣರ ನುಡಿ ಮುತ್ತುಗಳು’ ೧೯೯೧ರಲ್ಲಿ `ಕಲ್ಯಾಣ ದರ್ಶನ,’ ೧೯೯೨ರಲ್ಲಿ `ಚೆಂಬೆಳಕು,’ ೨೦೦೩ರಲ್ಲಿ `ಶರಣ ಸಂಸ್ಕೃತಿ ದರ್ಶನ' ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಬಸವಕಲ್ಯಾಣದ ಖಾಯಂ ನಿವಾಸಿಯಾಗಿದ್ದಾರೆ.
ರಘುನಾಥ ಹಡಪದ
ಸಾಹಿತಿ ರಘುನಾಥ ಹಡಪದ ರವರು ಮೂಲತಃ ತೆಲಂಗಾಣ ರಾಜ್ಯದ ಮೆದಕ್ ಜಿಲ್ಲೆ ನಾರಾಯಣ ಖೇಡ ತಾಲೂಕಿನ ಚಾಪ್ಪಿ (ಚಪ್ಪಾ ಖದೀಮ) ಗ್ರಾಮದ ಮಲ್ಲಪ್ಪ ಮತ್ತು ಸುಂದ್ರಮ್ಮಾ ದಂಪತಿಗಳಿಗೆ ದಿನಾಂಕ ೨೫-೭-೧೯೬೧ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ತೆಲುಗು ಮಾಧ್ಯಮದಲ್ಲಿ ಶಿಕ್ಷಣ ಪಡೆದ ಇವರು ೧೯೮೦ರಲ್ಲಿ ಬೀದರ ನಗರಕ್ಕೆ ವಲಸೆ ಬಂದು ಇಲ್ಲೆ ತಮ್ಮ ಮೂಲ ಉದ್ಯೋಗವೇ ವೃತ್ತಿಯಾಗಿ, ಸಾಹಿತ್ಯ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿ ಪ್ರದೇಶದಲ್ಲಿ ಹೊಂದಿರುವ ಇವರ ಹುಟ್ಟೂರು ಚಪ್ಪಿಯಲ್ಲಿ ಇವರದು ಕನ್ನಡ ಮಾತೃಭಾಷೆ ಕುಟುಂಬವಾಗಿದೆ ಆದರೆ ಇವರು ಶಿಕ್ಷಣ ಕಲಿತದ್ದು ಮಾತ್ರ ತೆಲುಗು. ಬದುಕಿಗೆ ವ್ಯವಹಾರಿಕ ಭಾಷೆ ಕನ್ನಡವಾಗಿದ್ದರಿಂದ ಇವರು ಅನಿವಾರ್ಯವಾಗಿ ಸ್ವಯಂ ಕಲಿಕೆಯಿಂದ ಕನ್ನಡ ಲಿಪಿ ಮತ್ತು ಭಾಷೆ ಕಲಿತು ಕನ್ನಡ ಸಾಹಿತ್ಯದಲ್ಲಿಯೂ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ೨೦೧೩ರಲ್ಲಿ `ನಿರಂಜನರ ತತ್ವಪದಗಳು' (ತತ್ವಪದ) ಮತ್ತು `ನಿಟ್ಟೂರಿನ ಮಜಿಗೆಪ್ಪ ಮುತ್ಯಾ (ಚರಿತೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಯೋಗ ಸಿದ್ದಾಂತ', `ಬ್ಯಾಲಹಳ್ಳಿಯ ಕರಿಬಸವೇಶ್ವರ ಬದುಕು ಬರಹ', `ನಿಜಾನಂದ ತತ್ವ ಪದಗಳು', `ಅಲ್ದೀಯ ತತ್ವ ಪದಗಳು', `ಬೀದರ ಜಿಲ್ಲೆಯ ಆಯ್ದ ತತ್ವಪದಗಳು', `ಜ್ನಾನನಂದಾ ಭಜನ ಮಾಲೆ', `ಬೀದರ ಜಿಲ್ಲೆಯ ಅಭಂಗ ತತ್ವಪದಗಳು', `ಜಾನಪದ ಇತಿಹಾಸದಲ್ಲಿ ತತ್ವಪದ ಸಾಹಿತ್ಯ ಪರಂಪರೆ', `ಧರಿನಾಡಿನ ತತ್ವಪದ ಸಾಹಿತ್ಯ', `ಮುಗಳಿ ಕಾಶಪ್ಪನವರ ಉಲ್ಲಾಸ ಲಹರಿ'. (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ತತ್ವಪದಗಳು ಆಕಾಶವಾಣಿ ದೂರದರ್ಶನದಲ್ಲಿಯೂ ಪ್ರಸಾರವಾಗಿವೆ. ಇವರಿಗೆ ೨೦೦೯ರಲ್ಲಿ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಿದ್ದರೆ, ೨೦೧೨ರಲ್ಲಿ ಧರಿನಾಡು ಕನ್ನಡ ಸಂಘದ ವತಿಯಿಂದ ಪ್ರಥಮ ತತ್ವಪದಕಾರರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಭಾನುವಾರ, ಜನವರಿ 12, 2025
ಡಾ.ಎಂ.ಜಿ.ದೇಶಪಾಂಡೆ
ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆಯವರು ಮೂಲತಃ ತೆಲಂಗಾಣದ ಮೆದಕ್ ಜಿಲ್ಲೆ ನಾರಾಯಣಖೇಡ ತಾಲೂಕಿನ ಮೋರಗಿ ಗ್ರಾಮದ ಗೋವಿಂದರಾವ ದೇಶಪಾಂಡೆ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೨೧-೩-೧೯೫೨ರಲ್ಲಿ ಜನಿಸಿದ್ದಾರೆ. ಬಿ.ಎ.ವರೆಗೆ ಕನ್ನಡ ಮಾದ್ಯಮದ ಪದವಿಧರರಾದ ಇವರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಪ್ರಧಾನ ವ್ಯವಸ್ಥಾಪಕರಾಗಿ ಬೀದರ ಭಾಲ್ಕಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹುಟ್ಟಿನಿಂದ ಬೀದರದಲ್ಲಿದ್ದುಕೊಂಡು ಕನ್ನಡ ಕಲಿತು ಐವತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಮತ್ತು ನಾಡು ನುಡಿ ಸೇವೆಗಾಗಿ ತಮ್ಮನ್ನು ತೊಡಿಸಿಕೊಂಡು ೧೯೬೬ರಲ್ಲಿಯೆ ಬರೆಯಲು ಪ್ರಾರಂಭಿಸಿ ೧೯೭೭ರಲ್ಲಿ `ಖ್ಯಾತಿ’ ಎಂಬ ಕೈಬರಹದ `ಲಿಥೋ' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಮತ್ತು ೧೯೭೪ರಲ್ಲಿ ಪ್ರಕಾಶ ಜ್ಯೋತಿ, ಹೂ ಬಾಡಿದಾಗ, ಆಶಾಕಿರಣ, ಸಂತ ಗವಾಯತ್ರಿ ಮೀರಾಬಾಯಿ, (ಕಾದಂಬರಿಗಳು) ಭ್ರಮೆ, ದೇವಯಾನಿ, ಶ್ರಾವಣಿ, ಯಾವುದು ಸತ್ಯ !, ಹೂ ಬಿಡದ ಗೂಲಾಬಿ ಗಿಡ, ಪಾರಿಜಾತ, ಕತೆಯಾದ ಬದುಕು, ಒಡೆದ ಕನ್ನಡಿ, (ಕಥಾ ಸಂಕಲನಗಳು) ಜೀವನ ಇಷ್ಟೇನಾ ? ಮಾಣಿಕ್ಯ ದೀಪ್ತಿ, ಕಾವ್ಯ ಸೌರಭ ಭಕ್ತಿ ಕುಸುಮಾಂಜಲಿ, ಗೀತ ಮಾನಸ, ದೇವನ ಜೋಕಾಲಿ , ದವಳಗಿರಿ, ವಿರಹ ಪ್ರೀತಿ, ವಂಶಿ, ಕಾವ್ಯ ಚಿತ್ರಾಂಬರಿ, ಅನ್ವೇಷಣ, (ಕವನ ಸಂಕಲನಗಳು) ಅಜ್ಜನ ಹಳ್ಳಿ,ಕಾಮನ ಬಿಲ್ಲು, ಚಂದ್ರಹಾರ, (ಮಕ್ಕಳ ಕವನ ಸಂಕಲನಗಳು) ಹನಿ ಹನಿ ಸುಧೆ, ಒಲವಿನ ಚಿತ್ತಾರಗಳು, ಇಂಚರ, ಹನಿ ಹನಿ ಜೇನ ಹನಿ, (ಹನಿಗವನ ಸಂಕಲನ) ಬದುಕು ಸಾಹಿತ್ಯ ಪ್ರಭು, ಸಾಹಿತ್ಯ ರತ್ನಗಳು, ವಿದುರನಗರಿ, ಚಿಂತನ ಮಂದಾರ (ಲೇಖನ ಸಂಕಲನಗಳು) ಮನಃಸಾಕ್ಷಿ (ಅನುವಾದ) ಪ್ರೀತಿ ತಂದ ಫಜಿತಿ (ನಾಟಕ) ಸದ್ಗುರು ಶ್ರೀಪತಾನಂದ ಮಹಾರಾಜ, ವಿಶ್ವಂಭರಾನAದ ಸ್ವಾಮಿಜಿ, ಶ್ರೀ ಜಗನ್ನಾಥ ಮಹಾರಾಜ, ಶಂಭುಲಿAಗೇಶ್ವರ ಮಾತೆ ಬಸ್ಸಮ್ಮ ಸದ್ಗುರುಜಿ, ಮಂತ್ರ ಮಹರ್ಷಿ ಶ್ರೀ ಸದ್ಗುರುಜಿ (ಚರಿತ್ರೆಗಳು) ವಚನ ಚಂದ್ರಿಕೆ, (ಆಧುನಿಕ ವಚನ ಸಂಕಲನ) ಬೆಳಕಿನ ಹೆಜ್ಜೆಗಳು (ಶಾಹಿರಿ) ಜೀವ ಸೇಲೆ (ಹಾಯ್ಕುಗಳು) ರತ್ನಾ ಕಾಳೆಗೌಡ ಮತ್ತು ಕಾಶಿನಾಥ ಪಾಟೀಲ್ ನಾಗಲಿಂಗ ಕವಿ, ಹರಿದತ್ತಾ ಭಜನಾಮೃತ್ ಸೇರಿದಂತೆ ಹಲವಾರು ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಇವರ ಶಂಭುಲಿAಗೇಶ್ವರ ಮಾತೆ ಬಸ್ಸಮ್ಮ ಸದ್ಗುರುಜಿ ದರ್ಶನ ಮತ್ತು ಮಂತ್ರ ಮಹರ್ಷಿ ಶ್ರೀ ಸದ್ಗುರುಜಿ, ಜಗನ್ನಾಥ ಮಹಾರಾಜ ಈ ಕೃತಿಗಳು ಹಿಂದಿ, ಇಂಗ್ಲೀಷ ಮತ್ತು ತೆಲುಗು ಭಾಷೆಗೆ ಅನುವಾದಗೊಂಡಿವೆ. ಮತ್ತು ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಹಾಗೂ ಮಹಾರಾಷ್ಟç ನಾಂದೇಡ ರಮಾನಂದ ತಿರ್ಥ ವಿಶ್ವವಿದ್ಯಾಲಯ ಮತ್ತು ಕಲಬುರಗಿ ಬಿಜಾಪೂರ ವಿಶ್ವವಿದ್ಯಾಲಯಗಳಿಂದ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿ ಮುದ್ರಣಗೊಂಡಿವೆ. ಇವರಿಗೆ ೧೬ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಹಾಸನ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬೀದರನಲ್ಲಿ ನಡೆದ ರಾಜ್ಯ ಮಟ್ಟದ ಎರಡನೇ ಕವಿ ಕಾವ್ಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಕುರಿತು ಬಸವರಾಜ ದಯಾಸಾಗರ ರವರು `ಅಪರೂಪದ ಸಾಹಿತಿ ಎಂ.ಜಿ. ದೇಶಪಾಂಡೆ’ ಎಂಬ ಕೃತಿ ಪ್ರಕಟಿಸಿದ್ದಾರೆ, ಮತ್ತು `ಸಾಹಿತ್ಯ ಮಂದಾರ’ ಎಂಬುದು ಇವರ ಅಭೀನಂದನಾ ಗೃಂಥವಾಗಿದೆ. ಸದ್ಯ ಇವರು ಬೀದರದ ನಿವಾಸಿಯಾಗಿ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕçತಿ ಪ್ರತಿಷ್ಠಾನ ಮೊದಲಾದ ಸಂಸ್ಥೆಯ ಮೂಲಕ ರಾಜ್ಯದ ಹಲವಾರು ಕವಿ ಕಲಾವಿದರಿಗೆ ಪ್ರತಿ ವರ್ಷ ಪ್ರಶಸ್ತಿ ಪುರಸ್ಕಾರಗಳು ನೀಡಿ ಪ್ರೊತ್ಸಾಹಿಸುತ್ತಿದ್ದಾರೆ.
ಪೂಜ್ಯ. ಶ್ರೀ.ಡಾ. ಬಸವಲಿಂಗ ಪಟ್ಟದ್ದೆವರು
ಸಾಹಿತಿ ಹಾಗೂ ಮಠಾದೀಶರಾದ ಪೂಜ್ಯ. ಶ್ರೀ.ಡಾ.ಬಸವಲಿಂಗ ಪಟ್ಟದೇವರು. ಇವರು ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆ ನಾರಾಯಣಖೇಡ ತಾಲೂಕಿನ ನಾಗೂರು ಗ್ರಾಮದ ಶ್ರೀ ರಾಚಪ್ಪ ಕಾಡೋದೆ ಮತ್ತು ಶ್ರೀಮತಿ ಭಾಗೀರಥಿ ದಂಪತಿಗಳಿಗೆ ದಿನಾಂಕ ೨೫-೮-೧೯೫೦ರಲ್ಲಿ ಜನಿಸಿದ್ದಾರೆ. ಇವರ ಮೂಲನಾಮ ಶಿವರಾಜು ಎಂದಾಗಿದೆ. ತುಂಬ ಬಡತನದಲ್ಲಿ ಹುಟ್ಟಿ ಬೆಳೆದ ಶ್ರೀಗಳು ಭಾಲ್ಕಿಯ ಶ್ರೀ ಚನ್ನಬಸವ ಪಟ್ಟದ್ದೆವರ ಸನ್ನಿಧಿಯ ಹಾನಗಲ್ ಕುಮಾರೇಶ್ವರರ ಉಚಿತ ಗುರುಪ್ರಸಾದ ನಿಲಯದಲ್ಲಿ ವಿದ್ಯೆಯನ್ನು ಸಂಪಾದಿಸಿ, ಶ್ರೀ ಮಠದಲ್ಲಿ ದಿನನಿತ್ಯ ಕಸಗೂಡಿಸುವುದು,ನೀರು ತರುವ ಕಾಯಕದಲ್ಲಿ ತೊಡಗಿ ಅಧ್ಯಯನ ಮಾಡಿದವರು. ಮುಂದೆ ಇವರು ಪೂಜ್ಯ. ಶ್ರೀ. ಚನ್ನಬಸವ ಪಟ್ಟದ್ದೆವರು ಗುರುಗಳಿಗೆ ಪ್ರೀತಿಯ ಶಿಷ್ಯರಾಗಿ ಬೆಳೆದು ನಂತರ ಶ್ರೀ ಮಠದ ಉತ್ತರಾಧಿಕಾರಿಯಾಗಿ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆಗಳನ್ನು ನೀಡಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಪ್ರೌಢ ಶಿಕ್ಷಣವು ಔರಾದನಲ್ಲಿ ಪೂರೈಸಿ, ಪಿ.ಯು.ಮತ್ತು ಪದವಿ ಶಿಕ್ಷಣವನ್ನು ಭಾಲ್ಕಿಯ ಚನ್ನಬಸವೇಶ್ವರ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಆಸಕ್ತರಾದ ಶ್ರೀಗಳು ಕೆಲ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಅವುಗಳೆಂದರೆ, `ಚೆಂಬೆಳಕು' (ಕವನ ಸಂಕಲನ) `ಬಸವ ನೈವೇದ್ಯ' (ಚಿಂತನಾ) `ಬಸವ ಜ್ಯೋತಿ' (ವಚನ ಸಂಗ್ರಹ) `ಇಷ್ಟಲಿಂಗ ಪೂಜಾ ವಿಧಾನ, `ಬಸವಣ್ಣನಿಂದ ಬದುಕಿತ್ತೇ ಲೋಕವೆಲ್ಲ,’ ಎಂಬ ನಲವತ್ತಕ್ಕೂ ಹೆಚ್ಚು ಕೃತಿಗಳು ಬರೆದಿದ್ದಾರೆ. ಇವರು ಬರೆದ ಕೃತಿಗಳಲ್ಲಿ ಒಂದು ಹಿಂದಿಗೆ ೧೭ ಮರಾಠಿ, ೬ ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಸುಮಾರು ೫ ಪ್ರಕಾಶನ ಸಂಸ್ಥೆಗಳನ್ನು ಹುಟ್ಟು ಹಾಕಿದ ಶ್ರೀಗಳು ಅವುಗಳ ಮೂಲಕ ೧೫೫ ಕೃತಿಗಳು ಪ್ರಕಟಿಸಿದ್ದು, ಅವುಗಳಲ್ಲಿ ೨೩ ತೆಲುಗು ಭಾಷೆಯ ಕೃತಿಗಳು ಮುದ್ರಣಗೊಂಡಿವೆ. ಮತ್ತು `ಶರಣ ಬಳಗ' ಸೇರಿದಂತೆ ೧೮ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ ಶ್ರೀಗಳು ಅವುಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೨-೯೩ರಲ್ಲಿ ಹೀರೆಮಠ ಸಂಸ್ಥಾನದ ವಿದ್ಯಾಪೀಠ (ಟ್ರಸ್ಟ್) ಸ್ಥಾಪಿಸಿ ಅದರಡಿಯಲ್ಲಿ `ಶ್ರೀ ಚನ್ನಬಸವೇಶ್ವರ ಗುರುಕುಲ' ವನ್ನು ಪ್ರಾರಂಭಿಸಿ ಕರಡ್ಯಾಳದಲ್ಲಿ ನಡೆಸುತ್ತಿದ್ದಾರೆ. ಅಷ್ಟೇಯಲ್ಲದೆ ೧೮ ಶಿಶು ವಿಹಾರ ಪ್ರಾಥಮಿಕ ಶಾಲೆಗಳು, ೯ ಪ್ರೌಢ ಶಾಲೆಗಳು, ೪ ಪದವಿ ಪೂರ್ವ ಕಾಲೇಜುಗಳು, ೨ ಡಿ.ಇಡಿ.೨ ಬಿ.ಇಡಿ. ಕಾಲೇಜುಗಳು, ೨ ಸಂಗೀತ ಶಾಲೆಗಳು ನಡೆಸುವುದರೊಂದಿಗೆ ಒಂದು ಅನಾಥ ಮಕ್ಕಳ ಕೇಂದ್ರವು ತೆರೆದು ಶೈಕ್ಷಣಿಕವಾಗಿ ಅಗಾಧವಾದ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಕಂಡು ೨೦೧೦ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿದರೆ, ೨೦೧೨ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಬಸವ ಪುರಸ್ಕಾರ ಹಾಗೂ ೧೦ ಲಕ್ಷ ನಗದು ಗೌರವಧನ ನೀಡಿ ಪುರಸ್ಕರಿಸಿದೆ. ಮತ್ತು ಬೆಂಗಳೂರಿನ ವಾರದ ಸ್ಫೋಟ ಪತ್ರಿಕೆಯಿಂದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ರಮಣ ಶ್ರೀ ಶರಣ ಪ್ರಶಸ್ತಿ, ನಾಗಪುರದ ಡಾ.ಸುಧಾಕರ ಬೋಗಲೆವಾಸ ಬಸವಶ್ರೀ, ಬೆಂಗಳೂರಿನ ಡಿನ್.ಎಸ್.ಮ್ಯಾನ್ ಸಾಹಿತ್ಯ ಪುರಸ್ಕಾರ ಲಭಿಸಿವೆ. ಇವರಿಗೆ ೨೦೦೪ರಲ್ಲಿ ಬೀದರನಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಮತ್ತು ಕರ್ನಾಟಕ ಸರ್ಕಾರದ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ಮತ್ತು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ದಿ.ಚನ್ನಯ್ಯ ಸ್ವಾಮಿ ಹೀರೆಮಠ
ಸಾಹಿತಿ ಚನ್ನಯ್ಯ ಸ್ವಾಮಿ ಹೀರೆಮಠ ರವರು ತೆಲಂಗಾಣ ರಾಜ್ಯದ ಮೆದಕ್ ಜಿಲ್ಲೆ ನಾರಾಯಣಖೇಡ ತಾಲೂಕಿನ ಮಾವಿನಹಳ್ಳಿ ಗ್ರಾಮದ ಮಡಿವಾಳಯ್ಯ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೧೬-೧೨-೧೯೩೨ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಕಮಲನಗರದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಹಿಂದಿ ಭಾಷಾ ಪ್ರೌಢ ಶಾಲಾ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೧೯೯೧ರಲ್ಲಿ ನಿವೃತ್ತರಾಗಿದ್ದಾರೆ.
ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೆವರ ಅಪಾರ ಶಿಷ್ಯವರ್ಗದವರಲ್ಲಿ ಒಬ್ಬರಾದ ಇವರು ಶ್ರೀಗಳೆಂದರೆ ಅವರಿಗೆ ಪಂಚಪ್ರಾಣ. ಅವರ ತತ್ವ ಸಿದ್ದಾಂತ ದಾರಿ ದೀಪದ ಮೆರೆಗೆ ಜೀವನದುದ್ದಕ್ಕೂ ಆಂಧ್ರಪ್ರದೇಶ (ಈಗಿನ ತೆಲಂಗಾಣ) ರಾಜ್ಯ ತೊರೆದು ಭಾಲ್ಕಿ ಮಠದಲ್ಲಿ ಅಧ್ಯಯನ ಮಾಡಿ ಕಮಲನಗರದಲ್ಲಿ ಬಾಳಿ ಬದುಕಿದವರು. ಇವರು ತೆಲಂಗಾಣದಲ್ಲಿ ಹುಟ್ಟಿರುವುದರಿಂದ ಇವರಿಗೆ ತೆಲುಗು, ಕನ್ನಡ, ಮರಾಠಿ, ಉರ್ದು,ಮೋಡಿ,ಹಿಂದಿ ಭಾಷೆಗಳ ಪರಿಜ್ಞಾನ ಹೊಂದಿದ್ದರು. ಮತ್ತು ಕನ್ನಡ ಮಾತೃಭಾಷೆಯಾಗಿದ್ದು ಆ ಭಾಷೆಯ ಶರಣ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ೨೦೦೧ರಲ್ಲಿ `ಬಸವ ಹೃದಯಿ ಚನ್ನಬಸವ' ಎಂಬ ಪೂಜ್ಯ. ಶ್ರೀ. ಚನ್ನಬಸವ ಪಟ್ಟದ್ದೆವರ ಜೀವನ ಚರಿತ್ರೆ, ೨೦೦೯ರಲ್ಲಿ `ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿ.’ ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ಆದರ್ಶ ಉತ್ತಮ ಶಿಕ್ಷಕ ಪ್ರಶಸ್ತಿ, ಭಾಲ್ಕಿ ಮಠದ ಪ್ರಶಸ್ತಿಗಳು ಲಭಿಸಿವೆ. ಇವರು ದಿನಾಂಕ ೨೧-೧೦-೨೦೧೯ರಂದು ಇಹಲೋಕ ತೇಜಿಸಿದ್ದಾರೆ
ಡಾ.ಜಯದೇವಿ ತಾಯಿ ಲಿಗಾಡೆ
ಕರ್ನಾಟಕ ಮತ್ತು ಮಹಾರಾಷ್ಟ್ರ ಸಾಹಿತ್ಯ ಚರಿತ್ರೆಗಳಲ್ಲಿ ಸ್ಥಿರ ಸ್ಥಾಯಿಯಾಗಿ ಉಳಿದ ಕನ್ನಡದ ದಿಟ್ಟ ಮಹಿಳಾ ಸಾಹಿತಿಯೆಂದರೆ, ಜಯದೇವಿ ತಾಯಿ ಲಿಗಾಡೆ. ಇವರು ಮಹಾರಾಷ್ಟ್ರದ ಸೊನ್ನಲಾಪೂರ (ಈಗಿನ ಸೊಲ್ಲಾಪುರ)ದ ಚನ್ನಪ್ಪ ಮಡಕಿ ಮತ್ತು ಸಂಗವ್ವ ವಾರದ ದಂಪತಿಗಳಿಗೆ ದಿನಾಂಕ ೨೩-೬-೧೯೧೨ರಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ಕನ್ನಡವಾದರೂ ಕಲಿತದ್ದು ಮರಾಠಿ ಮಾಧ್ಯಮದಲ್ಲಿ ಅದು ೪ನೇ ತರಗತಿಯವರೆಗೆ ಮಾತ್ರ. ೧೯೨೬ರಲ್ಲಿ ೧೪ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಮನೆತನದ ಚನ್ನಮಲ್ಲ ಲಿಗಾಡೆಯವರೊಂದಿಗೆ ವಿವಾಹವಾದ ಇವರು ಮೂರು ಮಕ್ಕಳಾದ ಮೇಲೆ ಸ್ವತಃ ಕನ್ನಡ ಕಲಿತು, ಹಿಂದಿ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಶರಣ ಸಾಹಿತ್ಯವನ್ನು ಅಧ್ಯಯನ ಮಾಡಿದ್ದಾರೆ. ೧೯೪೬ ರಲ್ಲಿ ಪತಿ ಚನ್ನಮಲ್ಲಪನವರು ಅಕಾಲಿಕ ಮರಣ ಹೊಂದಿದ್ದರು ಧೈರ್ಯ ಗುಂದದೆ ಕನ್ನಡದ ನಾಡು-ನುಡಿಗಾಗಿ ಅನೇಕ ಹೋರಾಟಗಳನ್ನು ಮಾಡಿ, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ ೧೯೬೫ರಲ್ಲಿ `ಸಿದ್ದರಾಮೇಶ್ವರ ಪುರಾಣ' (ಮಹಾಕಾವ್ಯ) ೧೯೫೨ರಲ್ಲಿ `ಜಯಗೀತ,’ ೧೯೬೨ರಲ್ಲಿ `ಬಂದೇವು ಕಲ್ಯಾಣಕ, ೧೯೬೮ರಲ್ಲಿ `ತಾರಕ ತಂಬೂರಿ,’ ೧೯೮೬ರಲ್ಲಿ `ಸಾವಿರದ ಪದಗಳು,’ ಮತ್ತು `ಅರಿವಿನಾಗರದಲ್ಲಿ.’ ಎಂಬ ಕೃತಿಗಳು ಕನ್ನಡದಲ್ಲಿ ಪ್ರಕಟಿಸಿದರೆ, ಮರಾಠಿ ಭಾಷೆಯಲ್ಲಿ `ಸಮೃದ್ಧ ಕರ್ನಾಟಕಾಂಚಿ ರೂಪುರೇಷಾ,’ `ಸಿದ್ದವಾಣಿ,’ `ಬಸವದರ್ಶನ,’ `ಮಹಾಯೋಗಿನಿ,’ `ಸಿದ್ದರಾಮಾಂ ಚಿ ತ್ರಿವಿಧಿ,’ `ಬಸವವಚನಾಮೃತ,’ `ಶೂನ್ಯ ಸಂಪಾದನೆ.’ ಸೇರಿದಂತೆ ಹಲವಾರು ಶರಣರ ವಚನಗಳು ಮರಾಠಿಗೆ ಅನುವಾದಿಸಿದ್ದಾರೆ. ಮತ್ತು ಮರಾಠಿಯಲ್ಲಿ ಬಸವಣ್ಣ ,ನೀಲಮ್ಮನ ವಚನಗಳು ಅನುವಾದಿಸಿ, ೨೧೫೦ ಪದ್ಯಗಳು ಸ್ವತಂತ್ರವಾಗಿ ರಚಿಸಿದ್ದಾರೆ. ಮತ್ತು ಭಾರತದ ಸ್ವತಂತ್ರ ಚಳವಳಿ ಹೈದರಾಬಾದ ಕರ್ನಾಟಕದ ವಿಮೋಚನೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ ದಿಟ್ಟ ಮಹಿಳೆಯಾಗಿ ಗುರುತಿಸಿಕೊಂಡ ಇವರು ಮರಾಠಿಗರ ನೆಲದಲ್ಲಿ `ಮಹಿಳಾ ಜ್ಞಾನ ಮಂದಿರ ಜಯದೇವಿ ಕನ್ಯಾ ಶಾಲಾ' ಎಂಬ ಶಾಲೆಯನ್ನು ಪ್ರಾರಂಭಿಸಿ, ಸೊಲ್ಲಾಪುರದಲ್ಲಿ ಕನ್ನಡ ಕಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಮತ್ತು ಕನ್ನಡದ ಏಕೀಕರಣಕ್ಕಾಗಿ ದೆಹಲಿಯವರೆಗೆ ಕಾಲು ನಡಿಗೆಯಲ್ಲಿಯೇ ಪಾದಾರ್ಪಣೆ ಮಾಡಿರುವುದು ಸಾಮಾನ್ಯ ವಿಷಯವೆನಲ್ಲ. ೧೯೫೦ರಲ್ಲಿ `ಕನ್ನಡ ಕೋಟೆ ಪ್ರಕಾಶನ’ ಸಂಸ್ಥೆಯನ್ನು ಸ್ಥಾಪಿಸಿದ ಇವರು, ಅದರ ಮೂಲಕ ಹಲವಾರು ಕನ್ನಡ ಪುಸ್ತಕಗಳು ಪ್ರಕಟಿಸಿ ಕನ್ನಡ ಚಳುವಳಿಯೆ ಮಾಡಿದ್ದಾರೆ. ಇವರು ಬರೆದ ಸಿದ್ದರಾಮೇಶ್ವರ ಪುರಾಣವೆಂಬ ಆಧುನಿಕ ಮಹಾಕಾವ್ಯವನ್ನು ತ್ರಿಪದಿಯಲ್ಲಿ ಬರೆದಿದ್ದು, ಅದು ಮೊದಲ ಮಹಿಳಾ ಮಹಾಕಾವ್ಯವೆಂಬ ಖ್ಯಾತಿಯು ಪಡೆದಿದೆ. ಇವರು ಹುಬ್ಬಳ್ಳಿ, ತುಮಕೂರಿನಲ್ಲಿ ನಡೆದ ಅಖಿಲ ಭಾರತ ಮಹಿಳಾ ಪರಿಷತ್ತಿನ ಅಧ್ಯಕ್ಷೆಯಾಗಿ, ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಗೋಷ್ಠಿಯ ಅಧ್ಯಕ್ಷೆಯಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷೆಯಾಗಿ, ಮುಂಬೈ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯ ಅಧ್ಯಕ್ಷೆಯಾಗಿದ್ದರ ಜೋತೆಗೆ ೧೯೭೪ರಲ್ಲಿ ಮಂಡ್ಯದಲ್ಲಿ ನಡೆದ ೪೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿದ್ದರಿಂದ ಇವರು ಆ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಎಂಬ ಖ್ಯಾತಿಯನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ, ನಾಡು- ನುಡಿಗಾಗಿ ಅವಿರತವಾಗಿ ಹೋರಾಟ ಮಾಡಿದ ಸಾಧನೆಯನ್ನು ಕಂಡು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಸೆನೆಟ್ ಸದಸ್ಯರಾಗಿ ಆಯ್ಕೆ ಮಾಡಿದಷ್ಟೆಯಲ್ಲದೆ ೧೯೭೬ರಲ್ಲಿ `ಗೌರವ ಡಾಕ್ಟರೇಟ್,’ ಮತ್ತು `ಡಿ.ಲಿಟ್,’ ಪದವಿಯನ್ನು ನೀಡಿ ಗೌರವಿಸಿದೆ. ಮತ್ತು ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಷ್ಟೇಯಲ್ಲದೆ ಇವರು ಮಹಾರಾಷ್ಟ್ರದ ಗಡಿಭಾಗಗಳನ್ನು ಕರ್ನಾಟಕಕ್ಕೆ ಸೇರಬೇಕೆಂದು ಸತತ ಹೋರಾಟಗಳನ್ನು ಮಾಡಿದರು. ಅದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದ್ದರಿಂದ, ತಮ್ಮ ಜೀವಿತದ ಕೊನೆಯ ದಿನಗಳನ್ನು ಕನ್ನಡದ ಮಣ್ಣಿನಲ್ಲಿ ಬೆರೆಯಬೇಕೆಂದು ಬಯಸಿ, `ನನ್ನ ಉಸಿರು ಕನ್ನಡದ ಗಾಳಿಯಲ್ಲಿ ತೆಲಾಡಿ, ದೇಹ ಕನ್ನಡದ ಮಣ್ಣಿನಿಂದ ಒಂದಾಗಿಬೇಕು’ ಎಂದು ಹಂಬಲಿಸಿ ೧೯೮೦ರಲ್ಲಿ ಶರಣರ ಕರ್ಮ ಭೂಮಿ ಬಸವಕಲ್ಯಾಣಕ್ಕೆ ಬಂದು ನೆಲೆಸಿದರು. ಇಲ್ಲಿ ೧೯೮೬ ಜುಲೈ ೨೪ರಂದು ಲಿಂಗೈಕ್ಯರಾಗಿದ್ದು ಅವರ ಸಮಾಧಿ ಬಸವಕಲ್ಯಾಣ ತ್ರಿಪೂರಾಂತದ ನೂತನ ಅನುಭವ ಮಂಟಪದ ಹತ್ತಿರದಲ್ಲಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)