ಪುಟಗಳು

ಭಾನುವಾರ, ಜನವರಿ 12, 2025

ಡಾ.ಜಯದೇವಿ ತಾಯಿ ಲಿಗಾಡೆ

ಕರ್ನಾಟಕ ಮತ್ತು ಮಹಾರಾಷ್ಟ್ರ ಸಾಹಿತ್ಯ ಚರಿತ್ರೆಗಳಲ್ಲಿ ಸ್ಥಿರ ಸ್ಥಾಯಿಯಾಗಿ ಉಳಿದ ಕನ್ನಡದ ದಿಟ್ಟ ಮಹಿಳಾ ಸಾಹಿತಿಯೆಂದರೆ, ಜಯದೇವಿ ತಾಯಿ ಲಿಗಾಡೆ. ಇವರು ಮಹಾರಾಷ್ಟ್ರದ ಸೊನ್ನಲಾಪೂರ (ಈಗಿನ ಸೊಲ್ಲಾಪುರ)ದ ಚನ್ನಪ್ಪ ಮಡಕಿ ಮತ್ತು ಸಂಗವ್ವ ವಾರದ ದಂಪತಿಗಳಿಗೆ ದಿನಾಂಕ ೨೩-೬-೧೯೧೨ರಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ಕನ್ನಡವಾದರೂ ಕಲಿತದ್ದು ಮರಾಠಿ ಮಾಧ್ಯಮದಲ್ಲಿ ಅದು ೪ನೇ ತರಗತಿಯವರೆಗೆ ಮಾತ್ರ. ೧೯೨೬ರಲ್ಲಿ ೧೪ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಮನೆತನದ ಚನ್ನಮಲ್ಲ ಲಿಗಾಡೆಯವರೊಂದಿಗೆ ವಿವಾಹವಾದ ಇವರು ಮೂರು ಮಕ್ಕಳಾದ ಮೇಲೆ ಸ್ವತಃ ಕನ್ನಡ ಕಲಿತು, ಹಿಂದಿ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಶರಣ ಸಾಹಿತ್ಯವನ್ನು ಅಧ್ಯಯನ ಮಾಡಿದ್ದಾರೆ. ೧೯೪೬ ರಲ್ಲಿ ಪತಿ ಚನ್ನಮಲ್ಲಪನವರು ಅಕಾಲಿಕ ಮರಣ ಹೊಂದಿದ್ದರು ಧೈರ್ಯ ಗುಂದದೆ ಕನ್ನಡದ ನಾಡು-ನುಡಿಗಾಗಿ ಅನೇಕ ಹೋರಾಟಗಳನ್ನು ಮಾಡಿ, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ ೧೯೬೫ರಲ್ಲಿ `ಸಿದ್ದರಾಮೇಶ್ವರ ಪುರಾಣ' (ಮಹಾಕಾವ್ಯ) ೧೯೫೨ರಲ್ಲಿ `ಜಯಗೀತ,’ ೧೯೬೨ರಲ್ಲಿ `ಬಂದೇವು ಕಲ್ಯಾಣಕ, ೧೯೬೮ರಲ್ಲಿ `ತಾರಕ ತಂಬೂರಿ,’ ೧೯೮೬ರಲ್ಲಿ `ಸಾವಿರದ ಪದಗಳು,’ ಮತ್ತು `ಅರಿವಿನಾಗರದಲ್ಲಿ.’ ಎಂಬ ಕೃತಿಗಳು ಕನ್ನಡದಲ್ಲಿ ಪ್ರಕಟಿಸಿದರೆ, ಮರಾಠಿ ಭಾಷೆಯಲ್ಲಿ `ಸಮೃದ್ಧ ಕರ್ನಾಟಕಾಂಚಿ ರೂಪುರೇಷಾ,’ `ಸಿದ್ದವಾಣಿ,’ `ಬಸವದರ್ಶನ,’ `ಮಹಾಯೋಗಿನಿ,’ `ಸಿದ್ದರಾಮಾಂ ಚಿ ತ್ರಿವಿಧಿ,’ `ಬಸವವಚನಾಮೃತ,’ `ಶೂನ್ಯ ಸಂಪಾದನೆ.’ ಸೇರಿದಂತೆ ಹಲವಾರು ಶರಣರ ವಚನಗಳು ಮರಾಠಿಗೆ ಅನುವಾದಿಸಿದ್ದಾರೆ. ಮತ್ತು ಮರಾಠಿಯಲ್ಲಿ ಬಸವಣ್ಣ ,ನೀಲಮ್ಮನ ವಚನಗಳು ಅನುವಾದಿಸಿ, ೨೧೫೦ ಪದ್ಯಗಳು ಸ್ವತಂತ್ರವಾಗಿ ರಚಿಸಿದ್ದಾರೆ. ಮತ್ತು ಭಾರತದ ಸ್ವತಂತ್ರ ಚಳವಳಿ ಹೈದರಾಬಾದ ಕರ್ನಾಟಕದ ವಿಮೋಚನೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ ದಿಟ್ಟ ಮಹಿಳೆಯಾಗಿ ಗುರುತಿಸಿಕೊಂಡ ಇವರು ಮರಾಠಿಗರ ನೆಲದಲ್ಲಿ `ಮಹಿಳಾ ಜ್ಞಾನ ಮಂದಿರ ಜಯದೇವಿ ಕನ್ಯಾ ಶಾಲಾ' ಎಂಬ ಶಾಲೆಯನ್ನು ಪ್ರಾರಂಭಿಸಿ, ಸೊಲ್ಲಾಪುರದಲ್ಲಿ ಕನ್ನಡ ಕಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಮತ್ತು ಕನ್ನಡದ ಏಕೀಕರಣಕ್ಕಾಗಿ ದೆಹಲಿಯವರೆಗೆ ಕಾಲು ನಡಿಗೆಯಲ್ಲಿಯೇ ಪಾದಾರ್ಪಣೆ ಮಾಡಿರುವುದು ಸಾಮಾನ್ಯ ವಿಷಯವೆನಲ್ಲ. ೧೯೫೦ರಲ್ಲಿ `ಕನ್ನಡ ಕೋಟೆ ಪ್ರಕಾಶನ’ ಸಂಸ್ಥೆಯನ್ನು ಸ್ಥಾಪಿಸಿದ ಇವರು, ಅದರ ಮೂಲಕ ಹಲವಾರು ಕನ್ನಡ ಪುಸ್ತಕಗಳು ಪ್ರಕಟಿಸಿ ಕನ್ನಡ ಚಳುವಳಿಯೆ ಮಾಡಿದ್ದಾರೆ. ಇವರು ಬರೆದ ಸಿದ್ದರಾಮೇಶ್ವರ ಪುರಾಣವೆಂಬ ಆಧುನಿಕ ಮಹಾಕಾವ್ಯವನ್ನು ತ್ರಿಪದಿಯಲ್ಲಿ ಬರೆದಿದ್ದು, ಅದು ಮೊದಲ ಮಹಿಳಾ ಮಹಾಕಾವ್ಯವೆಂಬ ಖ್ಯಾತಿಯು ಪಡೆದಿದೆ. ಇವರು ಹುಬ್ಬಳ್ಳಿ, ತುಮಕೂರಿನಲ್ಲಿ ನಡೆದ ಅಖಿಲ ಭಾರತ ಮಹಿಳಾ ಪರಿಷತ್ತಿನ ಅಧ್ಯಕ್ಷೆಯಾಗಿ, ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಗೋಷ್ಠಿಯ ಅಧ್ಯಕ್ಷೆಯಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷೆಯಾಗಿ, ಮುಂಬೈ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯ ಅಧ್ಯಕ್ಷೆಯಾಗಿದ್ದರ ಜೋತೆಗೆ ೧೯೭೪ರಲ್ಲಿ ಮಂಡ್ಯದಲ್ಲಿ ನಡೆದ ೪೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿದ್ದರಿಂದ ಇವರು ಆ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಎಂಬ ಖ್ಯಾತಿಯನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ, ನಾಡು- ನುಡಿಗಾಗಿ ಅವಿರತವಾಗಿ ಹೋರಾಟ ಮಾಡಿದ ಸಾಧನೆಯನ್ನು ಕಂಡು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಸೆನೆಟ್ ಸದಸ್ಯರಾಗಿ ಆಯ್ಕೆ ಮಾಡಿದಷ್ಟೆಯಲ್ಲದೆ ೧೯೭೬ರಲ್ಲಿ `ಗೌರವ ಡಾಕ್ಟರೇಟ್,’ ಮತ್ತು `ಡಿ.ಲಿಟ್,’ ಪದವಿಯನ್ನು ನೀಡಿ ಗೌರವಿಸಿದೆ. ಮತ್ತು ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಷ್ಟೇಯಲ್ಲದೆ ಇವರು ಮಹಾರಾಷ್ಟ್ರದ ಗಡಿಭಾಗಗಳನ್ನು ಕರ್ನಾಟಕಕ್ಕೆ ಸೇರಬೇಕೆಂದು ಸತತ ಹೋರಾಟಗಳನ್ನು ಮಾಡಿದರು. ಅದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದ್ದರಿಂದ, ತಮ್ಮ ಜೀವಿತದ ಕೊನೆಯ ದಿನಗಳನ್ನು ಕನ್ನಡದ ಮಣ್ಣಿನಲ್ಲಿ ಬೆರೆಯಬೇಕೆಂದು ಬಯಸಿ, `ನನ್ನ ಉಸಿರು ಕನ್ನಡದ ಗಾಳಿಯಲ್ಲಿ ತೆಲಾಡಿ, ದೇಹ ಕನ್ನಡದ ಮಣ್ಣಿನಿಂದ ಒಂದಾಗಿಬೇಕು’ ಎಂದು ಹಂಬಲಿಸಿ ೧೯೮೦ರಲ್ಲಿ ಶರಣರ ಕರ್ಮ ಭೂಮಿ ಬಸವಕಲ್ಯಾಣಕ್ಕೆ ಬಂದು ನೆಲೆಸಿದರು. ಇಲ್ಲಿ ೧೯೮೬ ಜುಲೈ ೨೪ರಂದು ಲಿಂಗೈಕ್ಯರಾಗಿದ್ದು ಅವರ ಸಮಾಧಿ ಬಸವಕಲ್ಯಾಣ ತ್ರಿಪೂರಾಂತದ ನೂತನ ಅನುಭವ ಮಂಟಪದ ಹತ್ತಿರದಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ