ಚಿಟಗುಪ್ಪ ತಾಲೂಕಿನ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಚಿಟಗುಪ್ಪ ತಾಲೂಕಿನ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಶುಕ್ರವಾರ, ಜನವರಿ 10, 2025
ಮೊಹಮ್ಮದ್ ತೈಯಬ್
ಬಹುಭಾಷಾ ಕವಿ ಮೊಹಮ್ಮದ್ ತೈಯಬ್ ರವರ ಮಾತೃಭಾಷೆ ಉರ್ದುವಾದರು ಕನ್ನಡದಲ್ಲಿ ಬರೆಯುತ್ತಾರೆ. ಇವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲ್ಲೂಕಿನ ಬೇಮಳಖೇಡ ಗ್ರಾಮದ ಎಕ್ಬಾಲಮಿಯ್ಯ ಮತ್ತು ನಸೀಮಾ ಬೇಗಂ ದಂಪತಿಗೆ ದಿನಾಂಕ ೪-೬-೧೯೮೯ರಲ್ಲಿ ಜನಿಸಿದ್ದಾರೆ. ಡಿ.ಎಡ್,ಎಂ.ಎ (ಹಿಂದಿ),ಎA.ಎ (ಇತಿಹಾಸ) ಪದವಿ ಪಡೆದು ಕೆಲಕಾಲ ಪೊಲೀಸ್ ಹುದ್ದೆ ನಿರ್ವಸಿ ಸದ್ಯ ಕಲಬುರ್ಗಿಯ ತೋಟಗಾರಿಕೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇವರು ಕನ್ನಡದಲ್ಲಿ `ಭೀಮಗಿರಿ', `ನವ ಚೈತ್ರ', `ಹದ್ದಿನ ಗೂಡು'. (ಕವನ ಸಂಕಲನಗಳು) `ಜನ್ಮ ಕೊಡು ತಾಯಿ' (ಕಥಾಸಂಕಲನ) `ಪರೋಪಕಾರ' `ದಿ ಹೀರೋ ಜಾಕ್ಲೇನ್ ಭಾಗ- ೧ `ಭೂತಗಳ ಹಡಗು' `ಕುತಂತ್ರ' (ಮಕ್ಕಳ ಕಥಾ ಸಂಕಲನಗಳು) ಹಿಂದಿಯಲ್ಲಿ `ಮಾನವತಾ ಕೀ ಖೋಜ್ ಮೇ' (ಕವನ ಸಂಕಲನ) ಉರ್ದುವಿನಲ್ಲಿ ಬೀದರನ ಪ್ರಮುಖ ಉರ್ದು ಸಾಹಿತಿಗಳ 'ಗಜಲ್' ಗಳನ್ನು ಕನ್ನಡಕ್ಕೆ ಲಿಪ್ಯಾಂತರಗೊಳಿಸಿ `ಮೀರ್ ನ ಗಜಲ್ ಗಳು' ಎಂಬ ಕೃತಿಯನ್ನು ಹೊರ ತಂದಿದ್ದಾರೆ. ಇವರ ಮಕ್ಕಳ ಕತೆ ಮಯೂರ ಮಾಸಪತ್ರಿಕೆ ಸೇರಿ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೨೦೧೬ರಲ್ಲಿ ದೂರದರ್ಶನ ಚಂದನ ವಾಹಿನಿಯ `ಬೆಳಗು’ ಕಾರ್ಯಕ್ರಮದಲ್ಲಿ ಇವರ ಸಂದರ್ಶನವು ಪ್ರಸಾರವಾಗಿದೆ,
ಡಾ. ಗೌತಮ್ಮ ಬಕ್ಕಪ್ಪ
ಯುವ ಕವಿ ಡಾ.ಗೌತಮ ಬಕ್ಕಪ್ಪ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಬಕ್ಕಪ್ಪ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೩-೧೯೮೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಪಿ.ಜಿ.ಡಿಪ್ಲೊಮಾ, ಪಿ.ಎಚ್ ಡಿ..ಪದವಿ ಪಡೆದು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ವಾರ್ಡನ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕತೆ, ಕವನ, ಆಧುನಿಕ ವಚನ, ಲೇಖನಗಳನ್ನು ಬರೆದು `ದಲಿತ ತತ್ವಗಳ ಚಿಂತನೆ' ಮತ್ತು `ಶಿಕ್ಷಣ, ಸಂಘಟನೆ, ಹೋರಾಟದ ಗಜಲ್ಗಳು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ದಲಿತ ಬಂಡಾಯ ಕತೆಗಳಲ್ಲಿ ಭಾಷೆ ಮತ್ತು ಸಂಸ್ಕೃತಿ' ಎಂಬುದು ಇವರ ಸಂಶೋಧನಾ ಗ್ರಂಥವಾಗಿದೆ. `ಶ್ರೀಗುರು ಗಂಗಾಧರ ಬಕ್ಕಪ್ರಭು' ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ರಚಿಸಿದ ಇವರು ೨೦ಕಿಂತ ಹೆಚ್ಚು ನಾಟಕಗಳಲ್ಲಿ ನಟಿಸಿ ಜಾನಪದ ಸಂಗೀತ ಕಲೆಯನ್ನು ಬೆಳೆಸಿಕೊಂಡಿದ್ದಾರೆ. ಇವರಿಗೆ ಹಾರಕೂಡ ಮಠದಿಂದ `ಕಲ್ಯಾಣ ಚನ್ನಶ್ರೀ' ಹಾಗೂ `ಸಿದ್ಧಾರ್ಥ' `ಧರಿಸಿರಿ' `ಕಾವ್ಯ ರತ್ನಾಂಜಲಿ' `ಕನ್ನಡ ರತ್ನ' `ಸಾವಿತ್ರಿ ಬಾಯಿ ಪುಲೆ' `ಸಾಹಿತ್ಯ ರತ್ನ' `ಕನಕ ಶ್ರೀ' `ಕನ್ನಡ ಸೇವಾ ರತ್ನ' ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಇವರ ಬರೆಹಗಳು ಸುಧಾ, ಭೀಮವಾದ, ಸ್ಥಿತಿಗತಿ, ಪ್ರಜಾವಾಣಿ, ಸಂಜೆವಾಣಿ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಹುಮನಾಬಾದ ತಾಲೂಕಿನ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗೀತಾಂಜಲಿ ಎಸ್.ಪಾಟೀಲ್
ಉದಯೋನ್ಮುಖ ಯುವ ಬರಹಗಾರ್ತಿಯಾದ ಗೀತಾಂಜಲಿ ಎಸ್.ಪಾಟೀಲ್. ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಬೇಮಳಖೇಡ ಗ್ರಾಮದ ಚನ್ನಪ್ಪ ಮತ್ತು ವಿದ್ಯಾವತಿ ದಂಪತಿಗಳಿಗೆ ದಿನಾಂಕ ೧-೬-೧೯೮೩ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ೨೦೦೫ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ನಂತರ ಬಡ್ತಿ ಹೊಂದಿ ಹುಮನಾಬಾದ ತಾಲೂಕಿನ ಉಡಮನಳ್ಳಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿದ್ದ ಇವರು ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ರಚಿನೆಯಲ್ಲಿ ತೊಡಗಿ ೨೦೧೭ರಲ್ಲಿ `ಬಾಡದಿರಲಿ ಭಾವ ಕುಸುಮ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿಗೆ ೨೦೧೬ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೊತ್ಸಾಹಧನವು ಲಭಿಸಿದೆ. ಇವರು ಹಿಂದಿಯಲ್ಲಿಯು ಕೆಲ ಬರಹಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಕವನ ಲೇಖನ, ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಸಾರಿಕಾ ಎಸ್.ಗಂಗಾ
ಕವಯತ್ರಿ ಸಾರಿಕಾ ಎಸ್.ಗಂಗಾ ರವರು ಬೀದರ ಜಿಲ್ಲೆ ಚಿಟಗುಪ್ಪದ ಹಣಮಂತರಾವ ಹಾಗೂ ಸರಸ್ವತಿ ದಂಪತಿಗಳಿಗೆ ದಿನಾಂಕ ೨೦-೦೮-೧೯೮೧ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಬೆನಚಿಂಚೋಳಿ ಸರಕಾರ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ದುಬಲಗುಂಡಿಯ ಸುಧೀರ ಗಂಗಾ ರವರ ಧರ್ಮ ಪತ್ನಿಯಾಗಿದ್ದು, `ನೆನಪಿನ ಕಾರಂಜಿ' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಹಲವಾರು ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವಿತೆ ವಾಚನ ಮಾಡಿದ್ದಾರೆ .ಮತ್ತು ತಮ್ಮ ಶಾಲಾ ಮಕ್ಕಳಿಗೆ ಸಾಹಿತ್ಯ ಅಭಿರುಚಿ ಬೆಳೆಸಿ ಅವರ ಸಾಹಿತ್ಯ ರಚನೆಗೆ ಪ್ರೊತ್ಸಾಹಿಸಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಪ್ರೇರಣೆ ನೀಡಿ ಪ್ರೊತ್ಸಾಹಿಸುತ್ತಿದ್ದಾರೆ. ಇವರಿಗೆ ತಾಲೂಕಿನ `ಉತ್ತಮ ಶಿಕ್ಷಕಿ ಪ್ರಶಸ್ತಿ, ಹಾಗೂ ಬೀದರ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿ ಪ್ರಶಸ್ತಿ, `ಕ್ರಿಯೇಟಿವ್ ಸೈನ್ಸ ಟೀಚರ್ ಅವಾರ್ಡ' ಇತ್ಯಾದಿ ಪಡೆದಿದ್ದಾರೆ . ಮಂಡ್ಯದಲ್ಲಿ ಇವರಿಗೆ ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. .
ಸುಬ್ಬಣ್ಣ ಕರಕನಳ್ಳಿ
ದಲಿತ ಬಂಡಾಯ ಸಾಹಿತಿ ಸುಬ್ಬಣ್ಣ ಕರಕನಳ್ಳಿ.ಯವರು ಬೀದರ ಜಿಲ್ಲೆಂ ಚಿಟಗುಪ್ಪ ತಾಲೂಕಿನ ಕರಕನಳ್ಳಿ ಗ್ರಾಮದ ಶಿವಪ್ಪ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೫-೬-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಎA.ಫೀಲ್ ಪದವಿಧರರಾದ ಇವರು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಹುಟ್ಟು ಹೋರಾಟಗಾರರಾದ ಇವರು ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುತ್ತಾ ಬರವಣಿಗೆಯಲ್ಲಿ ತೊಡಗಿ `ಬುದ್ಧ ಬಸವ ಅಂಬೇಡ್ಕರ್ ಬೆಳಕು’, `ರಾಷ್ಟ್ರ ಪ್ರೇಮ’, `ಅಮ್ಮನ ಹರಕೆ'. (ಕವನ ಸಂಕಲನಗಳು) `ಸಮಾನತೆಗಾಗಿ ಸಂಘರ್ಷ’ (ಸಂಶೋಧನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ಬೀದರದ ಕಸಾಪ, ಧರಿನಾಡು ಕನ್ನಡ ಸಂಘ, ದೇಶಪಾಂಡೆ ಪ್ರತಿಷ್ಠಾನ, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಜನಸೇವಾ ಸಂಸ್ಥೆ, ಅಂಬಿಗರ ಚೌಡಯ್ಯ ಯುವ ಸೈನ್ಯ ಮೊದಲಾದವರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ವಿಶ್ವ ಕನ್ನಡಿಗರ ಸಂಸ್ಥೆಯನ್ನು ಸ್ಥಾಪಿಸಿ ಅದರ ರಾಜ್ಯಾಧ್ಯಕ್ಷರಾಗಿ, ಬೀದರದ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ, ವೀರ ಕನ್ನಡಿಗರ ಸೈನ್ಯದ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಹಣಮಂತ ಮೇಲಕೇರಿ
ಸಾಹಿತಿ ಡಾ.ಹಣಮಂತ ಮೇಲಕೇರಿ. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮದರಗಿ ಗ್ರಾಮದ ಭೀಮಣ್ಣಾ ಮತ್ತು ಮಾಳಮ್ಮಾ ದಂಪತಿಗಳಿಗೆ ದಿನಾಂಕ ೧೫-೭-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫಿಲ್. ಪಿ.ಜಿ.ಡಿಪ್ಲೊಮಾ, ಪಿ.ಎಚ್.ಡಿ.ಪದವಿ ಪಡೆದು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೨೦೧೦ರಲ್ಲಿ `ಸೃಜನಶೀಲ ಸಾಹಿತಿ ಭಾಲಚಂದ್ರ ಜಯಶೆಟ್ಟಿ’ (ವ್ಯಕ್ತಿಚಿತ್ರಣ) ೨೦೧೪ರಲ್ಲಿ `ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಆಧುನಿಕ ವಚನಕಾರರು' ೨೦೧೮ರಲ್ಲಿ `ಬೀದರ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ' ಮತ್ತು `ಕಲಬುರಗಿ ಜಿಲ್ಲಾ ಆಧುನಿಕ ವಚನಕಾರರು' ೨೦೧೯ರಲ್ಲಿ `ಬೀದರ ಜಿಲ್ಲೆಯ ಜನಪದ ಕಲಾ ಪ್ರಕಾರಗಳು ಹಾಗೂ ಅವುಗಳ ಸಾಂಸ್ಕೃತಿಕ ಅಧ್ಯಯನ' ಎಂಬ ಕೃತಿಗಳು ಪ್ರಕಟಿಸಿ ೨೦೧೮ರಲ್ಲಿ `ಡಾ.ಎಸ್.ಎಸ್.ಅಂಗಡಿ' `ಕನ್ನಡ ದಲಿತ ಸಾಹಿತ್ಯ ಸಂಪುಟ-೪' 'ಸಿದ್ದೇಶ್ವರ ಸ್ವಾಮಿಜಿಯವರ ಅಮೃತವಾಣಿ' ಎಂಬ ಕೃತಿಗಳು ಸಂಪಾಸಿದ್ದಾರೆ. ಇವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜೋತ್ಸವ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಷಿಪ್ ಪ್ರಶಸ್ತಿ, ಜಗಜ್ಯೋತಿ ಕಾಯಕಶ್ರೀ ಪ್ರಶಸ್ತಿ, ರಾಷ್ಟ್ರೀಯ ಜ್ಞಾನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಇವರ ಲೇಖನ ಬರಹಗಳು ದಾಸೋಹ ರತ್ನ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಮೊದಲಾದವುಗಳಲ್ಲಿ ಪ್ರಕಟವಾಗಿವೆ.
ಮಾಣಿಕ ನೇಳಗಿ ತಾಳಮಡಗಿ
ಸಾಹಿತಿ ಮಾಣಿಕ ನೇಳಗಿಯವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದ ಕಲ್ಲಪ್ಪಾ ಮತ್ತು ಪಾರಮ್ಮ ದಂಪತಿಗಳಿಗೆ ದಿನಾಂಕ ೨೨-೦೭-೧೯೭೦ರಂದು ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೯೯ರಲ್ಲಿ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಗದಗ ಜಿಲ್ಲೆಯ ಮುಂಡರಗಿಯಲ್ಲಿ ಸೇವೆಗೆ ಸೇರಿ ಸದ್ಯ ಔರಾದ (ಬಿ) ತಾಲೂಕಿನ ಸಹಾಯಕ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು ಕತೆ, ಕವನ, ಲೇಖನ ಬರೆಯುವತ್ತಾ ಅಂದಿನ ದಿನಗಳಲ್ಲಿ ರಾಜ್ಯ ಮಟ್ಟದ ವಾರಪತ್ರಿಕೆ, ಮಾಸಪತ್ರಿಕೆ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಕವನ ಲೇಖನಗಳನ್ನು ಪ್ರಕಟಿಸಿ ಕವಿ ಸಾಹಿತಿಯಾಗಿ ಹೆಸರುವಾಸಿಯಾದವರು. ಅಷ್ಟೇಯಲ್ಲದೆ ಇವರ ಕವಿತೆ ಮತ್ತು ಚಿಂತನಗಳು ಕಲಬುರಗಿಯ ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಮತ್ತು ೨೦೨೦ರಲ್ಲಿ `ಬದಲಾಗೋಣ. ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. `ಬವಣೆ' `ಗಾಂಧಿಜಿಗೆ ನಮನ' ಎಂಬ ಹನಿಗವನ `ರುಕ್ಮಿಣಿಯ ಆತುರ ' ಎಂಬ ಕಥಾಸಂಕಲನ, `ಸಂಕೀರ್ಣ’ ಎಂಬ ಲೇಖನ, `ಮಾನವಿಯತೆ' ಎಂಬ ಚಿಂತನ ಕೃತಿಗಳು ಬರೆದಿದ್ದು ಅವು ಅಪ್ರಟಿತವಾಗಿವೆ. ಇವರ `ಕರುನಾಡ ಸಿರಿ’ ಎಂಬ ಕವನವು ಕಲಬುರಗಿ ಆಕಾಶವಾಣಿಯ ೫೦ನೇ ವಾರ್ಷಿಕೊತ್ಸವದಂದು ರಾಗ ಸಂಯೋಜಿಸಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿAದ ನವೆಂಬರ ೧ ರಂದು ಏಕಕಾಲಕ್ಕೆ ಪ್ರಸಾರವಾಗಿದೆ ಇವರಿಗೆ `ಧರಿರತ್ನ ಪ್ರಶಸ್ತಿ, ಕುವೆಂಪು ಸಿರಿ ಪ್ರಶಸ್ತಿ, ಸೃಜನ ಕವಿ ರತ್ನ ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ.
ವೀರೇಶಕುಮಾರ್ ಮಠಪತಿ
ಪತ್ರಕರ್ತ ಹಾಗೂ ಸಾಹಿತಿಗಳಾದ ವೀರೇಶಕುಮಾರ್ ಮಠಪತಿಯವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದ ದಿ.ವೇ.ನಾಗಯ್ಯ ಸ್ವಾಮಿ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧೬-೨-೧೯೭ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಎಂ.ಎ.ಎA.ಎಡ್.ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ೨೦೦೪ರಲ್ಲಿ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ, ನಂತರ `ಕಸ್ತೂರಿ ಕಿರಣ' ಎಂಬ ಪಾಕ್ಷಿಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿ, ಸದ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಲ್ಲಿಯೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು `ದಾರಿ ದೀಪ' ಮತ್ತು `ಮುಕ್ತಿ ಮಠದ ಧರ್ಮ ದೀಪ' ಎಂಬ ಕೃತಿಗಳು ಹೊರತಂದಿದ್ದಾರೆ. ೧೯೮೪ರಲ್ಲಿ ಸುಧಾ ವಾರ ಪತ್ರಿಕೆಯ ರಾಜ್ಯ ಮಟ್ಟದ `ಮಕ್ಕಳ ಕಥಾ' ಸ್ಪರ್ಧೆಯಲ್ಲಿ ಇವರ `ಜಾಣ ನರಿ' ಕತೆ ಪ್ರಥಮ ಬಹುಮಾನ ಪಡೆದು ಪ್ರಕಟವಾಗಿದೆ. ಇವರು ಸಾಹಿತ್ಯ ಹಾಗೂ ಸಂಘಟನೆಯೊAದಿಗೆ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವುದನ್ನು ಕಂಡು ೧೨ನೇ ಚಿಟಗುಪ್ಪ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರು ಶಿಕ್ಷಣ ಕ್ಷೇತ್ರದಲ್ಲಿಯು ತುಂಬ ಕಾಳಜಿಯುಳ್ಳವರಾಗಿದ್ದರಿಂದ `ಪೂಜ್ಯ ವೇ.ನಾಗಯ್ಯ ವೀರಯ್ಯ ಮಠಪತಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಪ್ರಾಥಮೀಕ ಪ್ರೌಢ ಶಾಲೆಗಳ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.
ದಿ. ಮ.ಮಾ.ಬೊರಾಳಕರ್
ಸಾಹಿತಿ ದಿ.ಮ.ಮಾ.ಬೊರಾಳಕರ್ ರವರ ಪೂರ್ಣನಾಮ ಮಲ್ಲಿಕಾರ್ಜುನ ಮಾಣಿಕಪ್ಪಾ ಬೊರಾಳಕರ್ ಎಂದಾಗಿದೆ. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿರ್ಣಾವಾಡಿ ಗ್ರಾಮದ ಮಾಣಿಕಪ್ಪಾ ಮತ್ತು ಸುಶೀಲಮ್ಮಾ ದಂಪತಿಗಳಿಗೆ ದಿನಾಂಕ ೧೨-೬-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್ ಪದವಿಧರರಾದ ಇವರು ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಇವರು ೧೯೯೦ರಲ್ಲಿ `ಚಿಗುರು’ ೧೯೯೨ರಲ್ಲಿ `ಕನ್ನಡಿಗನ ಹಾಡು’, `ಸವಿನೆನಪಿನ ಹಂದರ’ (ಕವನಸಂಕಲನಗಳು) `ವಿಶ್ವ ಪ್ರಸಿದ್ಧ ಬಿದರಿ ಕಲೆ’ (ಸಂಶೋಧನೆ) `ಎರಡು ಬಳ್ಳಿ ಹೂ ಹಲವು’, `ಬೀದರ ಜಿಲ್ಲೆಯ ಆಣಿ ಪಿಣಿ ಹಾಡುಗಳು’ (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೧೯೯೬ರಲ್ಲಿ ಕರ್ನಾಟಕ ಸರ್ಕಾರದ ನೆಹರು ಯುವ ಕೇಂದ್ರದ ಬೆಂಗಳೂರಿನಿAದ `ರಾಜ್ಯ ಯುವ ಪ್ರಶಸ್ತಿ, ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಆದರೆ ದುರದೃಷ್ಟ ಇವರು ೮-೨-೨೦೦೩ರಲ್ಲಿ ಅಕಾಲಿಕ ಸಾವನ್ನಪ್ಪಿದರಿಂದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಇವರು ಬರೆದ ನೂರಾರು ಅಪ್ರಕಟಿತ ಬರಹಗಳು ಪುಸ್ತಕ ರೂಪದಲ್ಲಿ ಹೊರತರಲು ಅವರ ಧರ್ಮ ಪತ್ನಿ ಮೀನಾಕುಮಾರಿ ಬೊರಾಳಕರ್ ರವರು ಶ್ರಮಿಸುತ್ತಿದ್ದಾರೆ.
ಮಂಗಲಾ ವಿ.ಕಪ್ಪರೆ
ಸಾಹಿತಿ ಹಾಗೂ ಕಲಾವಿದೆಯಾದ ಮಂಗಲಾ ವಿ.ಕಪ್ಪರೆಯವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಗುರಯ್ಯ ಸ್ವಾಮಿ ಮಾಸ್ತರ್ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೨-೩-೧೯೬೩ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ೧೯೯೫ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿ ಬೀದರದ ಜ್ಞಾನ ಗಂಗಾ ಹಿರಿಯ ಪ್ರಾಥಮಿಕ ಅನುದಾನಿತ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಸುಪ್ರಭಾತ’, `ಮಧುರ ಮಿಲನ’, `ಜೇಸುದಾಸನ ಕಿಂಡಿ’, `ಅಂಬರದ ಆಚೆ’.(ಕವನ ಸಂಕಲನಗಳು) `ಹುಚ್ಚಂಬಿ ಮತ್ತು ಇತರ ಕತೆಗಳು’ (ಕಥಾ ಸಂಕಲನ) `ತೂಗೂಯ್ಯಾಲೆ’ (ಕಾದಂಬರಿ) `ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರ ಚರಿತ್ರೆ,’ `ಮಾಣಿಕ್ಯ ಜ್ಯೋತಿ’ (ಚರಿತ್ರೆಗಳು) `ಕಾವ್ಯ ಗುಚ್ಛ' (ಸಂಪಾದನೆ) `ಚನ್ನ ಬಸವ ಪಟ್ಟದೇವರು' (ಹಿಂದಿಗೆ ಅನುವಾದ) `ಶಾಹಿನ್ ಕೆ ಸರ್ ತಾಜ್’, `ಮೇರಾ ಗಾಂವ ಮೇರಾ ಜೀವಾಳ್’, `ಚಿಡಿಯಾಕಾ ಘೋಸಲಾ' ಎಂಬ ಈ ಕೃತಿಗಳು ಹಿಂದಿಯಲ್ಲಿ ಬರೆದು ದ್ವಿಭಾಷಾ ಕವಯತ್ರಿಯಾಗಿ ಗುರ್ತಿಸಿಕೊಂಡಿದ್ದಾರೆ. ಮತ್ತು ಕೆಲ ಹಾಡುಗಳು ಸಿ.ಡಿ.ರೂಪದಲ್ಲಿ ಮುದ್ರಿಸಿರುವ ಇವರು ಕೆಲ ಧಾರವಾಹಿ ಚಲನ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಮೇಘಾಲಯದ ಶಿಲಾಂಗನಲ್ಲಿ ನಡೆದ ಸಮ್ಮೇಳನದಲ್ಲಿ ಅಲ್ಲಿನ ರಾಜ್ಯ ಪಾಲರಿಂದ ಗೌರವ ಸನ್ಮಾನ, ಚಂಡಿಗಡದಲ್ಲಿ ನಡೆದ ಸಮ್ಮೇಳನದಲ್ಲಿ ಇವರ ಕೃತಿ ಬಿಡುಗಡೆಯಾಗಿ ವಿಶೇಷ ಸನ್ಮಾನ, ನೇಪಾಳ ದೇಶದಲ್ಲಿ ನಡೆದ ಸಮ್ಮೇಳನದಲ್ಲಿ ಹಿಂದಿ ಕವನ ವಾಚಿಸಿದ್ದರಿಂದ ಅಲ್ಲಿನ ರಾಷ್ಟ್ರಪತಿಗಳು ಗೌರವ ಸನ್ಮಾನ ಮಾಡಿ `ಮಿಸ್ ನೇಪಾಳ' ಎಂಬ ಪ್ರಶಸ್ತಿಯು ನೀಡಿದ್ದಾರೆ. ಕಲಬುರಗಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ, ಸಂತ ಮೀರಾಬಾಯಿ ಪ್ರಶಸ್ತಿ, `ಸರೋಜಿನಿ ನಾಯ್ಡು ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಮೊದಲಾದ ಪ್ರಶಸ್ತಿಗಳು ಪಡೆದ ಇವರು ಸದ್ಯ ಕಲಬುರಗಿಯ ನಿವಾಸಿಯಾಗಿದ್ದಾರೆ.
ನರೇಶ ಹಮೀಲಪೂರಕರ್
ಕವಿ, ಸಾಹಿತಿ, ಲೇಖಕರಾದ ನರೇಶ ಹಮೀಲಪೂರಕರ್. ಇವರು ಬೀದರ ಜಿಲ್ಲೆ ಚಿಟಗುಪ್ಪಾದ ಶಿವರಾಮಜಿ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೬-೬-೧೯೬೨ರಲ್ಲಿ ಜನಿಸಿದ್ದಾರೆ. ಬಿ.ಇ.ಡಿಪ್ಲೊಮಾ ಇನ್ ಪೈನ್ ಆರ್ಟ್ಸ್ ಪದವೀಧರರಾದ ಇವರು ೨೦೦೧ರಲ್ಲಿ `ಶಬ್ದ ಸಂಗಮ, ೨೦೦೨ರಲ್ಲಿ `ಶಬ್ದ ಸಾಗರ' ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ `ಮಹಾತ್ಮ ಪುಲೆ ಸಮಾಜ ಸೇವಕ ಪ್ರಶಸ್ತಿ, ಕವಿರಾಜ ವಿದ್ಯಾ ಶಿರೋಮಣಿ, ಸಾಹಿತ್ಯ ರತ್ನ, ಸೇವಾ ರತ್ನ, ಮೈಥಲಿ ಶರಣ ಗುಪ್ತ’ ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಕನಕ ಬಕ್ಕಪ್ಪ
ಕವಿ, ಸಾಹಿತಿ ನಾಟಕಕಾರರೆಂದರೆ ಕನಕ ಬಕ್ಕಪ್ಪನವರು. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿಂಗಪ್ಪ ಮತ್ತು ಬಸಮ್ಮ ದಂಪತಿಗಳಿಗೆ ದಿನಾಂಕ ೧೦-೧೦-೧೯೫೭ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಬಿ.ಎ.ಬಿ.ಇಡಿ. ಪದವಿಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೧ರಲ್ಲಿ ನಿಧನರಾಗಿದ್ದಾರೆ. ಮತ್ತು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ `ಕರಕನಳ್ಳಿಯ ಬಕ್ಕ ಪ್ರಭು' (ನಾಟಕ) ಮತ್ತು `ಚಾಂಗಲೇರಿಯ ವೀರ ಭದ್ರೇಶ್ವರ ಸುಪ್ರಭಾತ' ಎಂಬ ಧ್ವನಿ ಸುರಳಿಯು ಮುದ್ರಿಸಿದ್ದಾರೆ. ಇವರ ಕವನ ಲೇಖನ ಬರಹಗಳು ೧೯೯೬ರಿಂದ ಕೆಲವರ್ಷ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿವೆ.
ಮಾಣಿಕರೆಡ್ಡಿ ದೇಶದ
ಸಾಹಿತಿ ನಾಟಕಕಾರರಾದ ಮಾಣಿಕರೆಡ್ಡಿ ದೇಶದ ರವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೇಮಳಖೇಡ ಗ್ರಾಮದ ವೀರಾರೆಡ್ಡಿ ಮತ್ತು ಗಂಗಮ್ಮಾ ದಂಪತಿಗಳಿಗೆ ೧೯೫೫ರಲ್ಲಿ ಜನಿಸಿದ್ದಾರೆ. ೧೦ನೇ ತರಗತಿಯ ವರೆಗೆ ಅಧ್ಯಯನ ಮಾಡಿದ ಇವರು ಬೇಸಾಯದ ವೃತ್ತಿಯೊಂದಿಗೆ ಕವನ, ನಾಟಕ ಭಜನೆ, ತತ್ವಪದ, ಅಭಂಗಗಳ ರಚನೆ ಮಾಡಿದ್ದಾರೆ. ೨೦೧೬ರಲ್ಲಿ `ವಿಮಳಖೇಡ ಮಾಣಿಕ ನಗರೇಶ’ ಎಂಬ ಅಂಕಿತನಾಮದ ತತ್ವಪದಗಳ ಕೃತಿ, ಹಾಗೂ ೨೦೧೮ರಲ್ಲಿ `ಗಂಗಾಧರ ಬಕ್ಕಪ್ರಭು ಭಜನೆ’ ಎಂಬ ಅಭಂಗ ಕೃತಿಯು ಪ್ರಕಟಿಸಿದ್ದಾರೆ. ಮತ್ತು `ಪ್ರೇಮ ತಂದ ದುರಂತ’ (ನಾಟಕ) `ಶ್ರೀ ಮನ್ನಿರಂಜನ ಗಂಗಾಧರ ಬಕ್ಕ ಪ್ರಭುಗಳ ೧೦೮ ನಾಮಾವಳಿ, ಆದರ್ಶ ವಿದ್ಯಾರ್ಥಿ’ ಎಂಬಿತ್ಯಾದಿ ಕೃತಿಗಳು ರಚಿಸಿರುವ ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಲಾಗಿದೆ.
ಎಸ್.ವಿ.ಕಲ್ಮಠ
ವಿಜ್ಞಾನ ಬರಹಗಾರ ಎಸ್.ವಿ.ಕಲ್ಮಠ. ಇವರ ಪೂರ್ಣನಾಮ ಸಂಗಯ್ಯಾ ವೀರಂತಯ್ಯಾ ಕಲ್ಮಠ ಎಂದಾಗಿದೆ. ಇವರು ಬೀದರ ಜಿಲ್ಲೆ ಚಿಟಗುಪ್ಪದ ವೀರಂತಯ್ಯಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೩೦-೮-೧೯೫೩ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪಿ.ಜಿ.ಡಿ.ಇ.ಎಂ. ಪದವಿಧರರಾದ ಇವರು ೧೯೭೬ರಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಜನಪ್ರಿಯ ವಿಜ್ಞಾನ ಲೇಖನಗಳು' (ಲೇಖನ) `ಪದವಿ ಪೂರ್ವ ವಿಜ್ಞಾನ ಜೀವಶಾಸ್ತ್ರ-೧' ಎಂಬ ಪಿ.ಯು.ಸಿ. ಜೀವಶಾಸ್ತ್ರ ವಿಷಯದ ಪಠ್ಯಪುಸ್ತಕ, `ಹೈದರಾಬಾದ್ ಕರ್ನಾಟಕ ಸಂಗೀತ ಪರಂಪರೆ' (ಆಕರ ಗ್ರಂಥ) ೧೯೯೨ರಲ್ಲಿ `ಪಂಚಾಕ್ಷರಿ ಸ್ಮರಣ ಸಂಚಿಕೆ' ಮತ್ತು ೨೦೧೬ರಲ್ಲಿ `ಸ್ಮರಣ ಸಂಚಿಕೆ ಗಾನಯೋಗಿ-೧' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ಬರಹಗಳು ವಿಜ್ಞಾನ ಸಂಗಾತಿ, ದಿಕ್ಸೂಚಿ, ಬಾಲವಿಜ್ಞಾನ, ಬಾಲವಿಕಾಸ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರು 'ಬಾಲವಿಜ್ಞಾನ' ಮಾಸಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ, ಬೀದರ ಜಿ.ಪಂ. `ಜೀವ ವೈವಿಧ್ಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಜೀವ ವೈವಿಧ್ಯತೆ ಪ್ರಾಧಿಕಾರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತದಲ್ಲಿಯು ತುಂಬಾ ಆಸಕ್ತರಾದ ಇವರು ೨೦೧೧ರಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಸಂಗೀತ ವಿದ್ಯಾಲಯ ಸ್ಥಾಪಿಸಿ ಕರ್ನಾಟಕ, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಶಿಕ್ಷಣ, ಉಪನ್ಯಾಸವನ್ನು ನೀಡುತ್ತಿದ್ದಾರೆ. ಆದ್ದರಿಂದ ಇವರಿಗೆ ೨೦೧೧ರಲ್ಲಿ ಕರ್ನಾಟಕ ಸರ್ಕಾರ `ಜೀವ ವೈವಿಧ್ಯ ಪ್ರಶಸ್ತಿ' ನೀಡಿ ಗೌರವಿಸಿದೆ. ಮತ್ತು ೨೦೧೫ರಲ್ಲಿ ಗದಗಿನ ಗಾನಗಂಧರ್ವ ಕಲಾ ಟ್ರಸ್ಟ್ ನಿಂದ `ಸಮಾಜ ಸೇವಾ ರತ್ನ' ಪ್ರಶಸ್ತಿ, ೨೦೧೬ರಲ್ಲಿ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಂಗೀತ ಕ್ರಾಂತಿಕಾರಿ ಚೂಡಾಮಣಿ' ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಷ್ಟೇಯಲ್ಲದೆ ಇವರಿಗೆ ೨೦೧೭ರಲ್ಲಿ ಚಿಟಗುಪ್ಪ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ಅಣ್ಣೆಪ್ಪ ರೊಡ್ಡಾ
ಹಿರಿಯ ಸಾಹಿತಿ ಅಣ್ಣೆಪ್ಪ ರೊಡ್ಡಾ ರವರು ಮೂಲತಃ ಚಿಟಗುಪ್ಪಾ ತಾಲೂಕಿನ ಮೀನಕೇರಾ ಗ್ರಾಮದ ವೀರಸಂಗಪ್ಪನವರ ಪುತ್ರನಾಗಿ ದಿನಾಂಕ ೮-೧೧-೧೯೪೫ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿ ಕತೆ ಕವನ, ಲೇಖನ ನಾಟಕ ಮೊದಲದವು ಬರೆದು ೨೦೧೪ರಲ್ಲಿ `ಕಾಗದ ಕುದುರೆ’ (ಕವನಸಂಕಲನ) ಪ್ರಕಟಿಸಿದ್ದಾರೆ. ಮತ್ತು ೧೯೭೧ರಲ್ಲಿ `ಮತಿಗೆಟ್ಟ ಮಡದಿ’ ಎಂಬ ಸಾಮಾಜಿಕ ನಾಟಕ, `ಮೀನಕೇರಾ ಗ್ರಾಮ ದರ್ಶನ’, `ಆಧುನಿಕ ವಚನಗಳು’, `ಚುಟುಕು ಚುಡಾರತ್ನ’ ಎಂಬ ಕೃತಿಗಳು ರಚಿಸಿದ್ದು ಅವು ಅಪ್ರಕಟಿತವಾಗಿವೆ.
ತಿಪರಂತಿ ಮಾಸ್ತರ ಚಿಡಗುಪ್ಪಿ
೧೯ನೇ ಶತಮಾನದ ದಲಿತ ಕವಿ, ನಾಟಕಕಾರ, ತತ್ವ ಪದಕಾರರೆಂದರೆ ತಿಪರಂತಿ ಮಾಸ್ತರ ಚಿಡಗುಪ್ಪಿ. ಇವರು ಬೀದರ ಜಿಲ್ಲೆ ಚಿಟಗುಪ್ಪಿಯವರು .ಇವರ ತಂದೆ ತಾಯಿ ಹೆಸರು ಮತ್ತು ಜನ್ಮ ದಿನಾಂಕ ಲಭ್ಯವಾಗಿಲ್ಲ. ಉಮರಾಯ ಎಂಬುವರು ಇವರ ಗುರುವಾಗಿದ್ದರು. ಇವರು ಮೋಡಿ ಅಕ್ಷರದ ಮೂಲಕ ಶಿಕ್ಷಣ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರೆಂದು ಮತ್ತು ಸಾಹಿತ್ಯದಲ್ಲಿ ಹಲವಾರು ಪ್ರಕಾರದ ಬರಹಗಳು ಬರೆದು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳಲ್ಲಿ ಧನಪಾಲರಾಜ,ನೀಲಕಂಠ ರಾಜ, ಫಕೀರ ಬಾಣಾಸೂರ, ಚಂದ್ರುಣಿ ' ಎಂಬ ನಾಟಕಗಳು ಮತ್ತು ತತ್ವ ಪದ, ಜಾನಪದ, ಕಲಗಿ ಪದ, ಎಂಬ ಗೀತೆಗಳು ರಚಿಸಿ. ಸ್ವತಃ ಕವಿಕಟ್ಟಿ ಹಾಡುವ ಇವರಿಗೆ `ಕವಿಶೂರ' ಎಂಬ ಬಿರುದು ಇತ್ತೆಂದು ಸಾಹಿತಿ. ತಿಳಿದು ಬರುತ್ತದೆ. ಇವರು ೧೯೬೮ರಲ್ಲಿ ನಿಧನರಾಗಿದ್ದಾರೆ.
ಪ್ರೊ. ಧನರಾಜ ನೀಲಾ.
ಉದಯೋನ್ಮಖ ಯುವ ಬರಹಗಾರರಲ್ಲಿ ಪ್ರಮುಖವಾಗಿ ಬೀದರ ಜಿಲ್ಲೆಯ ಕಾವ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರೆಂದರೆ ಪ್ರೊ. ಧನರಾಜ ನೀಲಾ ರವರು. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮೀನಕೇರಾ ಗ್ರಾಮದ ಹಿರಿಯ ಜಾನಪದ ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಕಾಶಿನಾಥ ನೀಲಾ ಮತ್ತು ಶ್ರೀಮತಿ ಮಲ್ಲಮ್ಮ ನೀಲಾ ದಂಪತಿಗಳಿಗೆ ದಿನಾಂಕ ೨೩-೦೫-೧೯೯೦ ರಲ್ಲಿ ಜನಿಸಿದ್ದಾರೆ. ಎಂ. ಎಸ್ಸಿ, (ಪಿ.ಎಚ್.ಡಿ) ಪದವಿಧರರಾದ ಇವರು ಕಲಬುರ್ಗಿಯ ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯದಲ್ಲಿ ಎಂಜಿನೀರಿಂಗ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗಣಿತ ಉಪನ್ಯಾಸಕನಾಗಿ ಸೇವೆ ಸಲ್ಲಿಸುವದರೊಂದಿಗೆ ಪಿ.ಎಚ್.ಡಿ ಪದವಿಯನ್ನು ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕವಾಗಿ ಅಧ್ಯಯನ ಮಾಡುತ್ತಿದ್ದಾರೆ.
ಬಾಲ್ಯದಿಂದಲೂ ತಮ್ಮ ತಂದೆಯ ಜಾನಪದ ಸಾಹಿತ್ಯದ ಪ್ರಭಾವದಿಂದಾಗಿ ಕತೆ, ಕವನ, ಚುಟುಕು, ಹನಿಗವನ, ಲೇಖನ ಮೊದಲಾದ ಬರಹಗಳ ರಚನೆಯಲ್ಲಿ ತೊಡಗಿಸಿಕೊಂಡು ಕವಿ, ಸಾಹಿತಿ, ಲೇಖಕರಾಗಿ ಗುರ್ತಿಸಿಕೊಂಡಿದ್ದಾರೆ. ಮತ್ತು ೨೦೧೪ ರಲ್ಲಿ `ಆರದಿರಲಿ ಜ್ಯೋತಿ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಹಲವಾರು ಕವನ, ಲೇಖನ, ಬರಹಗಳು ಕೆಲ ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಮತ್ತು ಕಲಬುರಗಿಯ `ದಾಸೋಹ ರತ್ನ’ ಮಾಸ ಪತ್ರಿಕೆ ಸೇರಿದಂತೆ ಮೊದಲಾದ ದಿನ ಪತ್ರಿಕೆಗಳಲ್ಲಿ ಹಾಗೂ `ಶರಣ ಸಾಧನೆ’ ಮೊದಲಾದ ಪ್ರಾತಿನಿಧಿಕ ಸಂಕಲನಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮತ್ತು ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಕೆಲ ಕನ್ನಡ ಪರ ಸಂಘ ಸಂಸ್ಥೆಯವರಿAದ ಹಾಗೂ ಕಲಬುರಗಿಯ ಪೂಜ್ಯ. ಶ್ರೀ ಡಾ.ಶರಬಸವಪ್ಪ ಅಪ್ಪ ಅವರಿಂದ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)