ಪುಟಗಳು

ಹುಮನಾಬಾದ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹುಮನಾಬಾದ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಫೆಬ್ರವರಿ 8, 2025

ಸಿದ್ಧಾರ್ಥ ಟಿ ಮಿತ್ರಾ.

ಉದಯೋನ್ಮುಖ ಯುವ ಕವಿ, ಸಾಹಿತಿ ಹಾಗೂ ಲೇಖಕರಾದ ಸಿದ್ಧಾರ್ಥ ಟಿ.ಮಿತ್ರಾ ರವರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ದುಬಲಗುಂಡಿ ಗ್ರಾಮದವರು. 3-11-1989 ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದಾರೆ. ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ತುಂಬ ಆಸಕ್ತರಾಗಿ ಕವನ ಲೇಖನ ಮೊದಲಾದ ಬರಹಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ಜನ ಮೆಚ್ಚುಗೆ ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ 'ಕಲ್ಯಾಣದಲ್ಲಿ ಕಾಯಕಯೋಗಿ ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ, ಲೋಕದ ಡೊಂಕು ತಿದ್ದುವ ಭರದಲ್ಲಿ ಕಾವಿಗೆ ಕಳಂಕ ತಂದ ಕಾವಿಧಾರಿಗಳು, ಕೊರತೆಗಳ ನಡುವೆಯೂ ವಿಶ್ವದ ಗಮನ ತನ್ನತ ಸೆಳೆದ ಈ ನೇಲದ ವೀರ ಮಾತೆಯರು, ಸಾಹೇಬ್ ನಾನು ಬರುತ್ತೆನೆ ನೀಮ್ಮ ಜೊತೆ, ಶೌರ್ಯ ಭೂಮಿ ಭೀಮಾಕೊರೆಗಾಂವ , ಬುದ್ದನಷ್ಟೆ ಪರಿಶುದ್ಧ ವ್ಯೆಕ್ತಿ ಅಂಬೇಡ್ಕರ್. ಇತ್ಯಾದಿಗಳಾಗಿವೆ. ಸಾಹಿತ್ಯ ಕೃಷಿಗೆ ಮೆಚ್ಚಿ ಜಿಲ್ಲಾ ಮಟ್ಟದ 'ಕನ್ನಡ ಸೇವಾ ರತ್ನ ಪ್ರಶಸ್ತಿ, ರಾಷ್ಟ್ರ ಮಟ್ಟದ ಸಾಹಿತ್ಯ ಸೌರಭ, ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ

ಮಂಗಳವಾರ, ಜನವರಿ 14, 2025

ರೋಹಿಣಿ ಬಿರಾದಾರ

ಯುವ ಕವಯತ್ರಿ ರೋಹಿಣಿ ಬಿರಾದಾರ ರವರು ಹುಮನಾಬಾದ ತಾಲೂಕಿನ ನಿಂಬೂರು ಗ್ರಾಮದ ಚಂದ್ರಕಾAತ ಮತ್ತು ಜೈ ಸುಧಾ ದಂಪತಿಗಳಿಗೆ ದಿನಾಂಕ ೨೭-೪-೨೦೦೧ ರಲ್ಲಿ ಜನಿಸಿದ್ದಾರೆ. ಬಿ.ಕಾಂ. ಪದವಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ಇವರು ವಿಶೇಷವಾಗಿ ಕಾವ್ಯ ರಚನೆಯಲ್ಲಿ ಹೆಚ್ಚು ಆಸಕ್ತರಾಗಿ ಎರಡು ನೂರಕ್ಕೂ ಹೆಚ್ಚು ಕವನಗಳು ರಚಿಸಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಹಾಗೂ ಕಸಾಪದ ವಿವಿಧ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೋಷ್ಠಿಗಳಲ್ಲಿ ಕವನ ವಾಚನೆ ಮಾಡಿದ್ದಾರೆ. ಇವರು `ಅಮ್ಮಾ ನೀನಿಲ್ಲದೆ' ಮತ್ತು `ಮಾತು ಬರಹವಾಗಿದೆ' ಎಂಬ ಕವನ ಸಂಕಲನಗಳು ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ.

ಡಾ. ರಾಜಶೇಖರ ಹೂಗಾರ

ಉದಯೋನ್ಮುಖ ಬರಹಗಾರ ಡಾ.ರಾಜಶೇಖರ ಹೂಗಾರ ರವರು ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದ ಶಿವರಾಜ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಹುಮನಾಬಾದಿನ ವೀರಭದ್ರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕವನ, ಲೇಖನ, ಚುಟುಕು, ಹನಿಗವನ, ಪ್ರಬಂಧಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಮತ್ತು `ಶ್ರೀ ರಂಜಾನ್ ದರ್ಗಾ ರವರ ಸಾಹಿತ್ಯ ಒಂದು ಅವಲೋಕನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ರಂಜಾನ್ ದರ್ಗಾ ರವರ ಕಾವ್ಯಾವಲೋಕನ' ಎಂಬ ಒಂದು ವಿಮರ್ಶಾ ಕೃತಿಯು ಬರೆದಿದ್ದಾರೆ. ಹೀಗೆ ಇವರು ತಮ್ಮ ಸಾಹಿತ್ಯ ರಚನೆಯೊಂದಿಗೆ ಹುಮನಾಬಾದ ತಾಲೂಕಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಬೇಲೂರಿನ ಉರಿಲಿಂಗ ಪೆದ್ದಿ ಮಠ, ಹಾಗೂ ಸಸ್ತಾಪೂರದ ಯಲ್ಲಾಲಿಂಗೇಶ್ವರ ಮಠದಿಂದ, ಮತ್ತು ಕಸಾಪ, ದಸಾಪದ ವತಿಯಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.

ಸಂಗಮೇಶ್ವರ ವ್ಹಿ.ಹಿರೇಮಠ

ಹವ್ಯಾಸಿ ಬರಹಗಾರರಾದ ಸಂಗಮೇಶ್ವರ ವ್ಹಿ.ಹಿರೇಮಠ ರವರು ಹುಮನಾಬಾದ ತಾಲೂಕಿನ ಮದರಗಾಂವ ಗ್ರಾಮದವರಾಗಿದ್ದು, ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ. ಕವನ, ಲೇಖನ, ಆಧುನಿಕ ವಚನಗಳು ರಚಿಸಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಗೀತಾ ರೆಡ್ಡಿ

ಉದಯೋನ್ಮುಖ ಕವಯತ್ರಿಯಾದ ಗೀತಾ ರೆಡ್ಡಿಯವರು ಹುಮನಾಬಾದ ತಾಲೂಕಿನ ಘಾಟಬೋರಾಳ ಗ್ರಾಮದ ಹನಮಂತರೆಡ್ಡಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೬-೩-೧೯೮೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಎಂ.ಎಸ್.ಡೆಬ್ಲು ಸ್ನಾತಕೋತ್ತರ ಪದವಿಧರರಾದ ಇವರು ೨೦೦೫ರಿಂದ ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ ನಿಯಂತ್ರಣ ಘಟಕದ ಆಪ್ತ ಸಮಾಲೋಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾದ ಇವರು ಕವನ, ಲೇಖನ, ಆಧುನಿಕ ವಚನ, ಮೊದಲಾದವು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಹಲವಾರು ಕವಿಗೋಷ್ಠಿಗಳಲ್ಲಿಯು ಕವನ ವಾಚನ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ವೃತ್ತಿ ಬದುಕಿನೊಂದಿಗೆ ವೈದ್ಯಕೀಯ ಲೇಖನಗಳು, ಹಾಗೂ ಆಹಾರ ಮತ್ತು ಆರೋಗ್ಯದ ಕುರಿತು ಮತ್ತು ದಾಂಪತ್ಯ ಜೀವನಕ್ಕೆ ಸಂಬAಧಿಸಿದ ಲೇಖನ, ಕವನ, ಚುಟುಕು, ಹನಿಗವನ ಸೇರಿದಂತೆ ಮೊದಲಾದ ಬರಹಗಳು ಬರೆಯುತ್ತಿದ್ದಾರೆ.

ಜಗನ್ನಾಥ ಬೇಂದ್ರೆ

ಕವಿ ಕಲಾವಿದರು ಹಾಗೂ ಹವ್ಯಾಸಿ ಬರಹರಾದ ಜಗನ್ನಾಥ ಬೇಂದ್ರೆಯವರು ಹುಮನಾಬಾದ ತಾಲೂಕಿನ ಮೋಳಕೇರಾ ಗ್ರಾಮದ ಸಂಬಣ್ಣ ಮತ್ತು ಶಾಂತಾಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ್ದಾರೆ. ಎಂ.ಎ.ಕನ್ನಡ ಹಿಂದೂಸ್ತಾನಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಮಂಠಾಳ ಪ್ರೌಢಶಾಲಾ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವರಚಿತ ಹಾಡು ಪದ್ಯಗಳನ್ನು ಬರೆದು ಹಾಡುವ ಆಕಾಶವಾಣಿ ಕಲಾವಿದರಾಗಿ ಹೆಸರು ವಾಸಿಯಾಗಿದ್ದಾರೆ. ಇವರು ಕಲಬುರಗಿ ಆಕಾಶವಾಣಿಯಿಂದ ಅನೇಕ ಭಾವ ಗೀತೆ, ಭಕ್ತಿ ಗೀತೆಗಳನ್ನು ಹಾಡಿ ಕೇಳುಗರ ಮನರಂಜಿಸಿದ್ದಾರೆ. ಇವರಿಗೆ ೨೦೦೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ರತ್ನ, ಸಂಗೀತ ಶ್ರೀ, ಬಸವ ಬೆಳಗು, ಕನ್ನಡ ಸೇವಾ ರತ್ನ' ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ನಾಗಮ್ಮ ಎಚ್.ಭಂಗರಗಿ

ಕವಯತ್ರಿ, ನಾಗಮ್ಮ ಎಚ್. ಭಂಗರಗಿಯವರು ಕಲಬುರ್ಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ಹುಲೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೯-೭-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ,ಫೀಲ್ ಪದವಿಧರರಾದ ಇವರು ೨೦೦೯ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಮನಾಬಾದ ತಾಲೂಕಿನ ಮನ್ನಾಏಖೇಳಿಯ ಮಲ್ಲಿಕಾರ್ಜುನ ಅಮಗೊಂಡ ಅವರ ಧರ್ಮ ಪತ್ನಿಯಾಗಿರುವ ಇವರು ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿದ್ದು, ತಮ್ಮ ತಂದೆಯವರು ಲೇಖಕರು, ಆಧ್ಯಾತ್ಮವಾದಿಗಳು ಹಾಗೂ ಸಮಾಜ ಸೇವಕರು ಆಗಿದ್ದರಿಂದ ಅವರ ಪ್ರೇರಣೆಯಿಂದ ಸಾಹಿತ್ಯ ರಚಿಸುತ್ತಿದ್ದಾರೆ. `ಬೀದರ ಜಿಲ್ಲೆಯ ಮಹಿಳಾ ಕಾವ್ಯಗಳ ಒಂದು ಅಧ್ಯಯನ’ ಎಂಬ ಕಿರು ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಹಾಗೂ `ಅಚಲ’ ಎಂಬ ಮಾಸಪತ್ರಿಕೆ ಹಾಗೂ ಕೆಲ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಇತರರು ಹೊರತಂದ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಯಲ್ಲಿ ಕವನ ವಾಚನವು ಮಾಡಿದ ಇವರು ಅನೇಕ ರಾಜ್ಯ, ರಾಷ್ಟ ಮಟ್ಟದ ಕಮ್ಮಟಗಳಲ್ಲಿಯೂ ಉಪನ್ಯಾಸಗಳು ನೀಡಿದ್ದಾರೆ. ಇವರ ಶೃಕ್ಷಣಿಕ ಹಾಗೂ ಸಾಹಿತ್ಯ ಸಾಧನೆಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ .

ಓಂಕಾರ ಪಾಟೀಲ್

ಹವ್ಯಾಸಿ ಬರಹಗಾರರಾದ ಓಂಕಾರ ಪಾಟೀಲ್ ರವರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಬಸವರಾಜ ಮತ್ತು ಪ್ರಭಾವತಿ ದಂಪತಿಗಳಿಗೆ ದಿನಾಂಕ ೨೫-೧೧-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ. ಪದವೀಧರರಾದ ಇವರು ಸ್ವಯಂ ವೃತ್ತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ , ಲೇಖನ, ಹನಿಗವನ, ಮೊದಲಾದವು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಕಲೆ, ಸಾಹಿತ್ಯದೊಂದಿಗೆ ಸಾಮಾಜಿಕ, ರಾಜಕೀಯವಾಗಿ ಗುರ್ತಿಸಿಕೊಂಡಿರುವ ಇವರು ಬೀದರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮತ್ತು ಚಕೋರ ಕವಿ ಕಾವ್ಯ ವೇದಿಕೆಯ ಪ್ರತಿನಿಧಿಯಾಗಿ. ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಇವರಿಗೆ ಕಸಾಪದ ವತಿಯಿಂದ ಬೆಳ್ಳಿ ಗೌರವ ಸನ್ಮಾನ ಮತ್ತು ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಸಾಹಿತ್ಯ ರತ್ನ ಪ್ರಶಸ್ತಿ, ಹಾಗೂ ಕಾಸರಗೋಡು ಸಾಹಿತ್ಯ ವೇದಿಕೆಯಿಂದ ಕಾವ್ಯ ಶಿಖಾಮಣಿ, ನೈಜದೀಪ ಸಾಹಿತ್ಯ ವೇದಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.

ಅನುರಾಧ ಕೆ.ಪೊದ್ದಾರ

ಉದಯೋನ್ಮುಖ ಕವಯತ್ರಿಯಾದ ಅನುರಾಧ ಕೆ.ಪೊದ್ದಾರ ರವರು ಹುಮನಾಬಾದ ತಾಲೂಕಿನ ಕಂದಗೂಳ ಗ್ರಾಮದ ಗೋಪಾಳರಾವ ಕುಲಕರ್ಣಿ ಮತ್ತು ಶೈಲಜಾ ಕುಲಕರ್ಣಿ ದಂಪತಿಗಳಿಗೆ ದಿನಾಂಕ ೨೭-೧೦-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ. ಬಿಎಡ್. ಪದವಿಧರರಾದ ಇವರು ಹುಮನಾಬಾದಿನ ಶ್ರೀ ಕಾಳೂರ ಲಿಂಗೇಶ್ವರ (ಸಿ.ಬಿ.ಎಸ್.ಸಿ) ಶಾಲೆಯ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿಯನ್ನು ಹೊಂದಿದ ಇವರು ವಿಶೇಷವಾಗಿ ಕಾವ್ಯ ರಚನೆ ಮಾಡುವುದರಲ್ಲಿ ತೊಡಗಿ ನೂರಾರು ಕವನ, ಆಧುನಿಕ ವಚನ ಲೇಖನಗಳನ್ನು ಬರೆದಿದ್ದಾರೆ. ಇವರ ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಸಾಹಿತ್ಯ ಸಮ್ಮೇಳನದಲ್ಲಿಯು ಪಾಲ್ಗೊಂಡು ತಮ್ಮ ಕವನಗಳ ವಾಚನ ಮಾಡಿದ್ದಾರೆ. ಆದ್ದರಿಂದ ಇವರಿಗೆ ವಿವಿಧ ಸಂಘ ಸಂಸ್ಥೆಯವರು ಇವರ ಕಾವ್ಯ ಕೃಷಿಯನ್ನು ಕಂಡು ಹಲವು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.

ಚನ್ನಪ್ಪ ಸಂಗೂಳಗಿ

ಉದಯೋನ್ಮುಖ ಬರಹಗಾರ ಚನ್ನಪ್ಪ ಸಂಗೂಳಗಿಯವರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಗಣಪತರಾವ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೫-೧೯೭೭ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿಧರರಾದ ಇವರು ೧೯೯೬ರಿಂದ ಬೀದರದ ಚಿದಂಬರ ಆಶ್ರಮ ಸಂಸ್ಥೆಯ ಎನ್.ಕೆ.ಜೆ.ಆಯುರ್ವೇದಿಕ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕತೆ, ಕವನ, ಚುಟುಕು, ಲೇಖನ, ಹನಿಗವನಗಳ ರಚನೆಯಲ್ಲಿ ತೊಡಗಿ `ಪ್ರೇಮ ಕಾರಂಜಿ' ಎಂಬ ಕವನ ಸಂಕಲನ ಮತ್ತು `ನೆನಪಿನ ಅಂಗಳ' ಎಂಬ ಕಥಾ ಸಂಕಲನ ಬರೆದಿದ್ದು, ಅವು ಅಪ್ರಕಟಿತವಾಗಿವೆ. ಇವರು ಬೆಂಗಳೂರಿನ ಸ್ವರಾಜ ಪತ್ರಿಕೆಯ ಜಿಲ್ಲಾ ವರದಿಗಾರರಾಗಿಯು ಸೇವೆ ಸಲ್ಲಿಸಿದ್ದು ಆ ಪತ್ರಿಕೆ ಸೇರಿದಂತೆ ವಚನ ಕ್ರಾಂತಿ, ಪಬ್ಲಿಕ್ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮತ್ತು ಇವರು ಅಖಿಲ ಸಾಹಿತ್ಯ ಶರಣ ಸಾಹಿತ್ಯ ಪರಿಷತ್ತು ಹಾಗೂ ಧರಿನಾಡು ಕನ್ನಡ ಸಂಘದ ಕಾರ್ಯದರ್ಶಿಯಾಗಿ, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಲ್ಯಾಣ ಕರ್ನಾಟಕ ವಿಭಾಗಿಯ ಕಾರ್ಯಾಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದಾರೆ. ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ಸಲ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರಿಗೆ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಿದೆ. ಮತ್ತು ವಿವಿಧ ಕನ್ನಡ ಪರ ಸಂಘ ಸಂಸ್ಥೆಯವರು ಸೇವಾ ರತ್ನ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಆರೂಢ ಪ್ರಶಸ್ತಿ, ಚುಟುಕು ಮಂದಾರ ರತ್ನ ಪ್ರಶಸ್ತಿ, ಚುಟುಕು ಚಂದ್ರಿಕೆ ಪ್ರಶಸ್ತಿ, ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.

ಡಾ. ಐಶ್ವರಿ ಶಂಭುಶಂಕರ

ಉದಯೋನ್ಮುಖ ಲೇಖಕಿ ಡಾ. ಐಶ್ವರಿ ಶಂಭುಶಂಕರ. ರವರು ಹುಮನಾಬಾದಿನ ರಾಮಚಂದ್ರಪ್ಪ ವೀರಪ್ಪನವರ ಓಣಿಯ ಶಿವರಾಯ ಮತ್ತು ತುಳಸಮ್ಮರ ದಂಪತಿಗಳಿಗೆ ದಿನಾಂಕ ೧೫-೧-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಹುಮನಾಬಾದಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಲೇಖನ ಮೊದಲಾದ ಬರಹಗಳು ಬರೆದಿದ್ದು,ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. `ಹೈದ್ರಾಬಾದ ಕರ್ನಾಟಕ ಪ್ರಕಟಿತ ಮಹಿಳಾ ಸಂಶೋಧನೆ, ಬೀದರ ಜಿಲ್ಲೆಯ ದಲಿತ ತತ್ವಪದಕಾರರು, ಹಾಗೂ `ತತ್ವ ಪದ ಸಾಹಿತ್ಯ' ಕುರಿತ ಇವರ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. .

ವಿಜಯಕುಮಾರ ಚಟ್ಟಿ

ಹವ್ಯಾಸಿ ಬರಹಗಾರ ವಿಜಯಕುಮಾರ ಚಟ್ಟಿ ಯವರು `ವಿಚಂಚೆ’ ಎಂಬ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿದ್ದಾರೆ. ಮತ್ತು `ಶ್ರೀವಿಜಯಾನಂದ’ ಎಂಬ ಅಂಕಿತನಾಮದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಹುಮನಾಬಾದಿನ ಚಂದ್ರಶೇಖರ ಚಟ್ಟಿ ಮತ್ತು ಜಯಶ್ರೀ ದಂಪತಿಗಳಿಗೆ ದಿನಾಂಕ-೧೧-೭-೧೯೭೪ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಪದವಿಧರರಾದ ಇವರು ಬೋಧಿವೃಕ್ಷ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಹನಿಗವನ ಲೇಖನಗಳನ್ನು ಬರೆದಿದ್ದಾರೆ. ಅವು ಕರ್ಮವೀರ, ಸಂಯುಕ್ತ ಕರ್ನಾಟಕ, ವಿಜಯವಾಣಿ ಈ ಭಾನುವಾರ, ಜನಪದ ಮುಂತಾದ ಪತ್ರಿಕೆಯಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಪ್ರಭು ಬಿ ಮಾಲೆ

ಉದಯೋನ್ಮುಖ ಕವಿ, ಕಲಾವಿದರಾದ ಪ್ರಭು ಬಿ.ಮಾಲೆ ರವರು ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದ ಬಂಡೆಪ್ಪಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ವೃತ್ತಿಪರ ಕಲಾವಿದರಾಗಿದ್ದಾರೆ. ಸಾಹಿತ್ಯದಲ್ಲಿಯು ಆಸಕ್ತರಾಗಿ ಕವನ, ಹಾಡು, ವಚನ, ಪದ್ಯಗಳನ್ನು ರಚನೆ ಮಾಡಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಇವರು ಕೆಲ ವರ್ಷ ಸಾಕ್ಷರತಾ ಸಂಯೋಜಕರಾಗಿ, ನವಚೇತನ ಕಲಾ ತಂಡದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸರ್ಕಾರಿ ಇಲಾಖೆಗಳ ವತಿಯಿಂದ ಜನಜಾಗೃತಿಗಾಗಿ ಬೀದಿ ನಾಟಕ, ಹಾಡು, ರೂಪಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಆರೋಗ್ಯ, ಕೃಷಿ, ಶಿಕ್ಷಣ, ಸಾಕ್ಷರತೆ, ಚುನಾವಣೆ, ನೀರು ಮತ್ತು ನೈರ್ಮಲ್ಯ, ಬಾಲ್ಯ ವಿವಾಹ, ವರದಕ್ಷಿಣೆ, ಬಾಲ ಕಾರ್ಮಿಕ, ಜೀತ ಪದ್ಧತಿ, ಮೂಢನಂಬಿಕೆ ಮೊದಲಾದ ವಿಷಯಗಳ ಕುರಿತಾದ ಬೀದಿ ನಾಟಕಗಳನ್ನು ರಚಿಸಿ ಸ್ವತಃ ಪಾತ್ರವನ್ನು ಮಾಡಿದ್ದಾರೆ. `ಅಪ್ಪ ನನ್ನ ಹೊಡೆಯಬೇಡಪ್ಪ' ಎಂಬ ಶಿಕ್ಷಣ ಇಲಾಖೆಯಡಿ ಪ್ರದರ್ಶಿಸಿದ ಬೀದಿ ನಾಟಕ ಸೇರಿದಂತೆ ಮೊದಲಾದ ಕವನ, ಲೇಖನ, ಬರಹಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.

ಸದಾಶಿವಯ್ಯಾ ಎಸ್. ಹಿರೇಮಠ

ಹವ್ಯಾಸಿ ಬರಹಗಾರ ಸದಾಶಿವಯ್ಯಾ ಎಸ್.ಹಿರೇಮಠ ರವರು ಹುಮನಾಬಾದ ತಾಲೂಕಿನ ಕಠಳ್ಳಿ ಗ್ರಾಮದ ಸೋಮಶೇಖರಯ್ಯಾ ಮತ್ತು ಶಕುಂತಲಾಬಾಯಿ ದಂಪತಿಗಳಿಗೆ ದಿನಾಂಕ ೪-೧೧-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಕೆಲಕಾಲ ಸಿ.ಆರ್.ಪಿ.ಯಾಗಿ, ಡಿ.ಪಿ.ಇ.ಪಿ.ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಸೇವೆ ಸಲ್ಲಿಸಿದ ಇವರು ಹಳ್ಳಿ ಖೇಡ (ಕೆ) ವಲಯ ಕಸಾಪ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದಾರೆ. ಮತ್ತು ಸದ್ಯ ಶಿಕ್ಷಣ ಇಲಾಖೆಯ ಆರ್.ಪಿ.ಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕವನ , ಲೇಖನ, ಹನಿಗವನ, ಪ್ರಬಂಧ, ಮೊದಲಾದವು ರಚಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಪ್ರೊ.ಜೈರಾಜ ಚಿಕ್ಕ ಪಾಟೀಲ್

ದೃಶ್ಯ ಕಲಾವಿದ, ಚಿತ್ರಕಾರ, ಸಾಹಿತಿಯಾದ ಪ್ರೊ.ಜೈರಾಜ ಚಿಕ್ಕ ಪಾಟೀಲ್. ರವರು ಹುಮನಾಬಾದ ತಾಲೂಕಿನ ನಿಂಬೂರು ಗ್ರಾಮದ ಮಡಿವಾಳಪ್ಪ ಮತ್ತು ವಿಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೭೦ರಲ್ಲಿ ಜನಿಸಿದ್ದಾರೆ. ದೃಶ್ಯ ಕಲಾ ವಿಷಯದಲ್ಲಿ ಎಂ.ಎಫ್.ಎ. ಮತ್ತು ಪಿ.ಎಚ್.ಡಿ ಪದವಿ ಪಡೆದ ಇವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ದೃಶ್ಯ ಕಲಾ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರಕಲೆಯೊಂದಿಗೆ ಕಾವ್ಯ ರಚನೆಯಲ್ಲೂ ಇವರದು ಎತ್ತಿದ ಕೈ ನಾಡಿನಾದ್ಯಂತ ಕವನ ಸ್ಪರ್ಧೆಯಲ್ಲಿ ಹಲವಾರು ಬಹುಮಾನ, ಪ್ರಶಸ್ತಿ ಪಡೆದ ಇವರು ಪ್ರತಿ ತಿಂಗಳು ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳಿಗೆ ಕವನ, ಹನಿಗವನಗಳು ಪ್ರಕಟಿಸಿ ಖ್ಯಾತಿ ಹೊಂದಿದ್ದಾರೆ. ತೊಂಬತ್ತರ ದಶಕದಲ್ಲಿಯೇ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡು ನಾಡಿನಾದ್ಯಂತ ಹೆಸರು ಮಾಡಿದ ಬೀದರದ ಕೆಲವೇ ಕೆಲವು ಸಾಹಿತಿಗಳಲ್ಲಿ ಇವರ ಹೆಸರು ಎದ್ದು ತೋರುತ್ತದೆ. ಇವರ ಬರಹಗಳು ಕರ್ಮವೀರ, ತುಷಾರ, ತರಂಗ, ಮಯೂರ, ಸುಧಾ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಮತ್ತು ೧೯೯೧ರಲ್ಲಿ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ `ಜನ್ಮ ಶತಾಬ್ದಿ' ಅಂಗವಾಗಿ ಪ್ರಕಟಿಸಿದ ರಾಜ್ಯ ಮಟ್ಟದ ಕವನ ಸಂಕಲನದಲ್ಲಿ ಇವರ `ಜೀವನದ ಅರ್ಥ, ಎಂಬ ಕವನ ಆಯ್ಕೆಯಾದರೆ ೧೯೯೬ರಲ್ಲಿ ಬೆಂಗಳೂರಿನಿAದ ಪ್ರಕಟವಾದ `ಎರಡು ಬಳ್ಳಿ, ಹೂ ಹಲವು, ಎಂಬ ಕವಿತೆ ಆಯ್ಕೆಯಾಗಿ ಪ್ರಕಟಾಗಿದೆ.ಮತ್ತು ೨೦೦೧ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘ, ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ `ಜಗಳ' ಎಂಬ ಕವಿತೆ ಆಯ್ಕೆಯಾಗಿ `ಜ್ಞಾನಸೂರ್ಯ' ಕವನಸಂಕಲನದಲ್ಲಿ ಪ್ರಕಟವಾಗಿದೆ. ಈ ಕೃತಿ ಮಚ್ಚೇಂದ್ರ ಪಿ ಅಣಕಲ್. ರವರು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ಕೆಲ ಕನ್ನಡಪರ ಸಂಘ ಸಂಸ್ಥೆಗಳ ವತಿಯಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಕನ್ಯಾಕುಮಾರಿ

ಕವಯತ್ರಿಯಾದ ಕನ್ಯಾಕುಮಾರಿ ಯವರು. ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಶಾಂತಪ್ಪಾ ದೇವರಾಯ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೨-೭-೧೯೬೯ರಲ್ಲಿ ಜನಿಸಿದ್ದಾರೆ. ಎಂ. ಎ ಸ್ನಾತಕೋತ್ತರ ಪದವಿಧರರಾಗಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಶಾಂತಪ್ಪ ದೇವರಾಯ `ದೇಶಾಂಶ ಹುಡಗಿ' ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿ ಖ್ಯಾತರಾಗಿದ್ದಾರೆ. ಅವರ ಮಗಳಾದ ಇವರು ಕತೆ, ಕವನ, ಚುಟುಕು, ಲೇಖನ, ಆಧುನಿಕ ವಚನ ಮೊದಲಾದ ಪ್ರಕಾರದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಇವರ ಬರಹಗಳು ರಾಜ್ಯ ಮಟ್ಟದ ಕೆಲ ಪತ್ರಿಕೆ ಹಾಗೂ ಪ್ರಾತಿನಿಧೀಕ ಸಂಕಲನ ಮತ್ತು ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಬೀದರ ಜಿಲ್ಲೆಯ ವಿವಿಧ ಸಾಹಿತ್ಯಕ ಸಭೆ ಸಮಾರಂಭದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಉತ್ತಮ ನಿರೂಪಕಿಯಾಗಿಯು ಗುರುತಿಸಿಕೊಂಡಿದ್ದಾರೆ.

ಸೂರ್ಯಕಲಾ ಎಸ್. ಹೊಡಮನಿ

ಕವಯತ್ರಿ ಸೂರ್ಯಕಲಾ ಎಸ್.ಹೊಡಮನಿ. ರವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಚಾಂಡೆಶ್ವರಿ ಗ್ರಾಮದ ಶಿವಲಿಂಗಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೨-೨-೧೯೬೬ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ. ಪದವಿಧರರಾದ ಇವರು ೧೯೯೨ರಿಂದ ಹುಮನಾಬಾದ ತಾಲೂಕಿನ ಹಳ್ಳಿಖೇಡ್ (ಬಿ) ಗ್ರಾಮದ ಅನುದಾನಿತ ಭಾಯಿ ಬನ್ಸಿಲಾಲ್ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರು ವಿವಾಹವಾದ ನಂತರ ತಮ್ಮ ಪತಿ ಎಸ್.ಎಸ್.ಹೊಡಮನಿಯವರ ಸಾಹಿತ್ಯಕ್ಕೆ ಮಾರುಹೋಗಿ ಕವಿತೆ ಬರೆಯಲು ಪ್ರಾರಂಭಿಸಿರುವುದು ಅವರ ಉತ್ತಮ ಸಾಹಿತ್ಯಿಕ ಬೆಳವಣಿಗೆಯಾಗಿದೆ. ಈ ಇಬ್ಬರು ಸತಿಪತಿಗಳು ಕೂಡಿಕೊಂಡು ಹಲವಾರು ಕವನಗಳು ರಚಿಸಿದ್ದು, ಅವು ಓದುಗರ ಮನಸೂರೆಗೊಳಿಸಿವೆ. ಇವರು `ಅಮ್ಮಾ' ಎಂಬ ಕವನ ಸಂಕಲನವನ್ನು ಬರೆದಿದ್ದು, ಅಲ್ಲದೆ ಇನ್ನೂ ಹಲವಾರು ಕವನ,ಲೇಖನ, ಜಾನಪದ ಸಂಪಾದಿತ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಮತ್ತು ಜನಪದ ಶೈಲಿಯಲ್ಲಿ ಕೆಲ ಕತೆಗಳು ಕೂಡ ಬರೆದಿದ್ದಾರೆ.

ಶಿವರಾಜ ಪಿ.ಕಿಣಗಿ

ಅಧ್ಯಾತ್ಮಿಕ ತಳಹದಿಯಲ್ಲಿ ಬರೆಯುತ್ತಿರುವ ಶಿವರಾಜ ಪಿ.ಕಿಣಗಿಯವರು ಹುಮನಾಬಾದ್ ತಾಲೂಕಿನ ಕಲ್ಲೂರು ಗ್ರಾಮದ ಪೀರಪ್ಪ ಮತ್ತು ಕಾಶಮ್ಮ ದಂಪತಿಗಳಿಗೆ ದಿನಾಂಕ ೧-೨-೧೯೫೮ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಹುಮನಾಬಾದಿನ ಶ್ರೀ ಬೀರಲಿಂಗೇಶ್ವರ ಪ.ಪಂ.ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತರಾಗಿರುವುದರಿಂದ ಭಜನೆ ಪದಗಳನ್ನು ಹಾಡುತ್ತಾ ಬೆಳೆದವರು. ಬರು ಬರುತ್ತಾ ಭಜನೆ ಹಾಡುಗಳನ್ನು ಬರೆಯಲು ಸುರುಮಾಡಿ ತಮ್ಮದೆ ರಾಗ ಧಾಟಿಯಲ್ಲಿ ಹಾಡಿ ಅನೇಕ ವೈಚಾರಿಕ ಲೇಖನಗಳು ಬರೆದಿದ್ದಾರೆ. `ಕೇಳಿಸುತ್ತಿದೆಯೇ ಧರ್ಮದ ಹೂಂಕಾರ', `ಗುರುವಿನ ಗುರುತು', `ಯುವಕರಿಗೆ ಕರೆ', `ಜಾತಿ ವ್ಯವಸ್ಥೆ ಒಂದು ಸಮಸ್ಯೆಯೇ?', `ದೇವರಾಗುವ ದಾರಿ', `ನಾನು ಯಾರು?', `ಪ್ರೇಮವೇ ಪರಮೇಶ್ವರ', `ಭಜನೆ ಪದಗಳು' ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.

ಚ.ರಾ.ವಡ್ಡನಕೇರಿ

ಹವ್ಯಾಸಿ ಬರಹಗಾರರಾದ ಚ.ರಾ.ವಡ್ಡನಕೇರಿಯವರ ಪೂರ್ಣನಾಮ `ಚನ್ನಬಸವ ರಾಚಪ್ಪ ವಡ್ಡನಕೇರಿ' ಎಂದಾಗಿದೆ. ಇವರು ಹುಮನಾಬಾದ ತಾಲೂಕಿನ ಮೋಳಕೇರಿ ಗ್ರಾಮದಲ್ಲಿ ದಿನಾಂಕ ೨೩-೮-೧೯೫೪ರಲ್ಲಿ ಜನಿಸಿದ್ದಾರೆ. ಮತ್ತು ಬೀದರ ಪ್ರಧಾನ ಅಂಚೆ ಕಚೇರಿಯಲ್ಲಿ ಗ್ರಾಹಕ ಸೌಲಭ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತರಾಗಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಅನೇಕ ಕವನ, ಲೇಖನ ಆಧುನಿಕ ವಚನಗಳು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ.

ಗದಗ ಪುಂಡಲೀಕರಾವ

ಹವ್ಯಾಸಿ ಬರಹಗಾರರಾದ ಗದಗ ಪುಂಡಲೀಕರಾವರವರು ಹುಮನಾಬಾದ ತಾಲೂಕಿನ ಅಲ್ಲೂರ್ ಗ್ರಾಮದ ಮರಿಯಪ್ಪ ಮತ್ತು ಮರಿಯಮ್ಮ ದಂಪತಿಗಳಿಗೆ ದಿನಾಂಕ ೪-೩-೧೯೫೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಪ್ರೌಢ ಶಾಲಾ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೧ರಲ್ಲಿ ನಿವೃತ್ತರಾಗಿದ್ದಾರೆ. ಕವನ, ಲೇಖನ, ಹಾಡುಗಳನ್ನು ರಚಿಸಿರುವ ಇವರ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರದ ರಾಂಪೂರೆ ಕಾಲೋನಿಯಲ್ಲಿ ವಾಸವಾಗಿದ್ದಾರೆ.