ಪುಟಗಳು

ಭಾನುವಾರ, ಜನವರಿ 12, 2025

ಪೂಜ್ಯ. ಶ್ರೀ.ಡಾ. ಬಸವಲಿಂಗ ಪಟ್ಟದ್ದೆವರು

ಸಾಹಿತಿ ಹಾಗೂ ಮಠಾದೀಶರಾದ ಪೂಜ್ಯ. ಶ್ರೀ.ಡಾ.ಬಸವಲಿಂಗ ಪಟ್ಟದೇವರು. ಇವರು ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆ ನಾರಾಯಣಖೇಡ ತಾಲೂಕಿನ ನಾಗೂರು ಗ್ರಾಮದ ಶ್ರೀ ರಾಚಪ್ಪ ಕಾಡೋದೆ ಮತ್ತು ಶ್ರೀಮತಿ ಭಾಗೀರಥಿ ದಂಪತಿಗಳಿಗೆ ದಿನಾಂಕ ೨೫-೮-೧೯೫೦ರಲ್ಲಿ ಜನಿಸಿದ್ದಾರೆ. ಇವರ ಮೂಲನಾಮ ಶಿವರಾಜು ಎಂದಾಗಿದೆ. ತುಂಬ ಬಡತನದಲ್ಲಿ ಹುಟ್ಟಿ ಬೆಳೆದ ಶ್ರೀಗಳು ಭಾಲ್ಕಿಯ ಶ್ರೀ ಚನ್ನಬಸವ ಪಟ್ಟದ್ದೆವರ ಸನ್ನಿಧಿಯ ಹಾನಗಲ್ ಕುಮಾರೇಶ್ವರರ ಉಚಿತ ಗುರುಪ್ರಸಾದ ನಿಲಯದಲ್ಲಿ ವಿದ್ಯೆಯನ್ನು ಸಂಪಾದಿಸಿ, ಶ್ರೀ ಮಠದಲ್ಲಿ ದಿನನಿತ್ಯ ಕಸಗೂಡಿಸುವುದು,ನೀರು ತರುವ ಕಾಯಕದಲ್ಲಿ ತೊಡಗಿ ಅಧ್ಯಯನ ಮಾಡಿದವರು. ಮುಂದೆ ಇವರು ಪೂಜ್ಯ. ಶ್ರೀ. ಚನ್ನಬಸವ ಪಟ್ಟದ್ದೆವರು ಗುರುಗಳಿಗೆ ಪ್ರೀತಿಯ ಶಿಷ್ಯರಾಗಿ ಬೆಳೆದು ನಂತರ ಶ್ರೀ ಮಠದ ಉತ್ತರಾಧಿಕಾರಿಯಾಗಿ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆಗಳನ್ನು ನೀಡಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಪ್ರೌಢ ಶಿಕ್ಷಣವು ಔರಾದನಲ್ಲಿ ಪೂರೈಸಿ, ಪಿ.ಯು.ಮತ್ತು ಪದವಿ ಶಿಕ್ಷಣವನ್ನು ಭಾಲ್ಕಿಯ ಚನ್ನಬಸವೇಶ್ವರ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಆಸಕ್ತರಾದ ಶ್ರೀಗಳು ಕೆಲ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಅವುಗಳೆಂದರೆ, `ಚೆಂಬೆಳಕು' (ಕವನ ಸಂಕಲನ) `ಬಸವ ನೈವೇದ್ಯ' (ಚಿಂತನಾ) `ಬಸವ ಜ್ಯೋತಿ' (ವಚನ ಸಂಗ್ರಹ) `ಇಷ್ಟಲಿಂಗ ಪೂಜಾ ವಿಧಾನ, `ಬಸವಣ್ಣನಿಂದ ಬದುಕಿತ್ತೇ ಲೋಕವೆಲ್ಲ,’ ಎಂಬ ನಲವತ್ತಕ್ಕೂ ಹೆಚ್ಚು ಕೃತಿಗಳು ಬರೆದಿದ್ದಾರೆ. ಇವರು ಬರೆದ ಕೃತಿಗಳಲ್ಲಿ ಒಂದು ಹಿಂದಿಗೆ ೧೭ ಮರಾಠಿ, ೬ ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಸುಮಾರು ೫ ಪ್ರಕಾಶನ ಸಂಸ್ಥೆಗಳನ್ನು ಹುಟ್ಟು ಹಾಕಿದ ಶ್ರೀಗಳು ಅವುಗಳ ಮೂಲಕ ೧೫೫ ಕೃತಿಗಳು ಪ್ರಕಟಿಸಿದ್ದು, ಅವುಗಳಲ್ಲಿ ೨೩ ತೆಲುಗು ಭಾಷೆಯ ಕೃತಿಗಳು ಮುದ್ರಣಗೊಂಡಿವೆ. ಮತ್ತು `ಶರಣ ಬಳಗ' ಸೇರಿದಂತೆ ೧೮ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ ಶ್ರೀಗಳು ಅವುಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೨-೯೩ರಲ್ಲಿ ಹೀರೆಮಠ ಸಂಸ್ಥಾನದ ವಿದ್ಯಾಪೀಠ (ಟ್ರಸ್ಟ್) ಸ್ಥಾಪಿಸಿ ಅದರಡಿಯಲ್ಲಿ `ಶ್ರೀ ಚನ್ನಬಸವೇಶ್ವರ ಗುರುಕುಲ' ವನ್ನು ಪ್ರಾರಂಭಿಸಿ ಕರಡ್ಯಾಳದಲ್ಲಿ ನಡೆಸುತ್ತಿದ್ದಾರೆ. ಅಷ್ಟೇಯಲ್ಲದೆ ೧೮ ಶಿಶು ವಿಹಾರ ಪ್ರಾಥಮಿಕ ಶಾಲೆಗಳು, ೯ ಪ್ರೌಢ ಶಾಲೆಗಳು, ೪ ಪದವಿ ಪೂರ್ವ ಕಾಲೇಜುಗಳು, ೨ ಡಿ.ಇಡಿ.೨ ಬಿ.ಇಡಿ. ಕಾಲೇಜುಗಳು, ೨ ಸಂಗೀತ ಶಾಲೆಗಳು ನಡೆಸುವುದರೊಂದಿಗೆ ಒಂದು ಅನಾಥ ಮಕ್ಕಳ ಕೇಂದ್ರವು ತೆರೆದು ಶೈಕ್ಷಣಿಕವಾಗಿ ಅಗಾಧವಾದ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಕಂಡು ೨೦೧೦ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿದರೆ, ೨೦೧೨ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಬಸವ ಪುರಸ್ಕಾರ ಹಾಗೂ ೧೦ ಲಕ್ಷ ನಗದು ಗೌರವಧನ ನೀಡಿ ಪುರಸ್ಕರಿಸಿದೆ. ಮತ್ತು ಬೆಂಗಳೂರಿನ ವಾರದ ಸ್ಫೋಟ ಪತ್ರಿಕೆಯಿಂದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ರಮಣ ಶ್ರೀ ಶರಣ ಪ್ರಶಸ್ತಿ, ನಾಗಪುರದ ಡಾ.ಸುಧಾಕರ ಬೋಗಲೆವಾಸ ಬಸವಶ್ರೀ, ಬೆಂಗಳೂರಿನ ಡಿನ್.ಎಸ್.ಮ್ಯಾನ್ ಸಾಹಿತ್ಯ ಪುರಸ್ಕಾರ ಲಭಿಸಿವೆ. ಇವರಿಗೆ ೨೦೦೪ರಲ್ಲಿ ಬೀದರನಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಮತ್ತು ಕರ್ನಾಟಕ ಸರ್ಕಾರದ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ಮತ್ತು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ