ಪುಟಗಳು

ಭಾನುವಾರ, ಜನವರಿ 12, 2025

ಕೆ.ನೀಲಾ

ಸಾಹಿತಿ ಕೆ.ನೀಲಾ ರವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ಕಾಶಿನಾಥ ಸ್ವಾಮಿ ಮತ್ತು ಚಿನ್ನಮ್ಮ ದಂಪತಿಗಳಿಗೆ ದಿನಾಂಕ ೧-೮-೧೯೬೬ರಲ್ಲಿ ಜನಿಸಿದ್ದಾರೆ. ಇವರು ಓದಿದ್ದು ಬರಿ ಪಿ.ಯು.ಸಿ.ವರೆಗೆ ಮಾತ್ರ. ಆದರೆ ಕನ್ನಡ, ಹಿಂದಿ,ಮರಾಠಿ, ಆಂಗ್ಲ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ೧೯೯೫ರಲ್ಲಿ `ಬದುಕು ಬೀದಿಯ ಪಯಣ' ೨೦೧೬ರಲ್ಲಿ `ಜಾತಿ ಸೂತಕವಳಿದು' (ಕವನ ಸಂಕಲನಗಳು) ೨೦೦೯ರಲ್ಲಿ `ಜ್ಯೋತಿಯೋಳಗಣ ಕಾಂತಿ' ೨೦೧೧ರಲ್ಲಿ `ತಿಪ್ಪೆಯನ್ನರಸಿ' ಎಂಬ (ಕಥಾಸಂಕಲನಗಳು) ೨೦೦೯ರಲ್ಲಿ `ಬಾಳಕೌದಿ' ಮತ್ತು `ನೆಲದ ಪಿಸುಮಾತು' (ಅಂಕಣ ಬರಹ) ೨೦೦೧ರಲ್ಲಿ `ಬದುಕು ಬಂದಿಖಾನೆ' ೨೦೦೫ರಲ್ಲಿ `ಮಹಿಳಾ ಶೋಷಣೆ ನೆಲೆಗಳು’ ೨೦೧೯ರಲ್ಲಿ `ನೆಲದ ನಂಟು' ಮತ್ತು `ಬೇವರ ಬದುಕು' (ಲೇಖನ ಸಂಕಲನಗಳು) ೨೦೧೭ರಲ್ಲಿ `ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ' (ಚರಿತ್ರೆ) `ರಾಮಪೂರದ ಬಕ್ಕಪ್ಪ ಮತ್ತು ಇತರರ ತತ್ವಪದಗಳು’, `ಎಲೆ ರಾಜೊಳಿ ಕರಿಗೂಳೇಶ ಮತ್ತು ಇತರರ ತತ್ವಪದಗಳು', ಕನ್ನಡ ತತ್ವಪದಗಾರ್ತಿಯ ವಾಚಿಕೆ, ಮತ್ತು `ಭಾರತದ ಮೇಲೆ ಧಾಳಿ'. (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಕರುಳಿರಿಯುವ ನೋವು' ಎಂಬ ಕತೆ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮತ್ತು `ತಿಪ್ಪೆಯನ್ನರಸಿ' ಎಂಬ ಕತೆಯು ೨೦೧೦ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಮತ್ತೆರಡು ಕತೆಗಳು ಮೆಚ್ಚುಗೆ ಪಡೆದಿವೆ. `ಕೊಂದಹರುಳಿದರೆ' ಎಂಬ ಕತೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಚಿನ್ನದ ಪದಕ ಪಡೆದಿದೆ. ೨೦೦೯ರಲ್ಲಿ ಸೇಡಂ ಮುನ್ನೂರು ಪ್ರತಿಷ್ಠಾನದ ವತಿಯಿಂದ `ಅಮ್ಮಾ' ಪ್ರಶಸ್ತಿ, ೨೦೧೧ರಲ್ಲಿ ಮೈಸೂರಿನ `ಶ್ರೀಮತಿ ರಾಗೌ ಪ್ರಶಸ್ತಿ' ೨೦೧೯ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕಸಾಪ ದತ್ತಿ ನಿಧಿ ಪ್ರಶಸ್ತಿ, ಮತ್ತು ಶಿವಮೊಗ್ಗ ದಿಂದ `ಹಾಮಾನಾ ಪ್ರಶಸ್ತಿ, ಪಡೆದಿದ್ದಾರೆ. ೨೦೧೨ರಲ್ಲಿ ಬಸವಕಲ್ಯಾಣದ ಬೇಲೂರಿನಲ್ಲಿ ನಡೆದ ಬೀದರ ಜಿಲ್ಲಾ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ, ೨೦೧೩ರಲ್ಲಿ ಬೀದರನಲ್ಲಿ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಮತ್ತು ೨೦೧೬ರಿಂದ ೨೦೧೮ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ