ಪುಟಗಳು

ಭಾನುವಾರ, ಜನವರಿ 12, 2025

ಮುಡಬಿ ಗುಂಡೆರಾವ್

ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಡಬಿಯವರಾದ ಇವರು `ಮುಡಬಿ ಗುಂಡೆರಾವ್' ಎಂದೇ ಖ್ಯಾತರಾಗಿ ಸಂಶೋಧನಾ ಸಾಹಿತ್ಯ ರಚಿಸಿ, ಮೂರು ದಶಕಗಳಿಂದ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕಲಬುರಗಿ ಜಿಲ್ಲೆ ನೂತನ ಕಮಲಾಪೂರ ತಾಲ್ಲೂಕಿನ ಹೊಡಲ್ ಗ್ರಾಮದ ಅಂಬಾರಾಯ ಪೋಲಿಸ್ ಪಾಟೀಲ್. ಮತ್ತು ಮಹಾಂತಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್ ಪದವಿಧರರಾದ ಇವರು ಸೇಡಂ ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ೨೦ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸೇಡಂ ತಾಲ್ಲೂಕಿನ ಸ್ಮಾರಕಗಳ ಸಾಂಸ್ಕೃತಿಕ ಒಂದು ಅಧ್ಯಯನ' ಎಂಬುದು ಇವರ ಎಂ.ಫೀಲ್ ಪ್ರಬಂಧವಾಗಿದೆ. ವಿದ್ಯಾರ್ಥಿಯಾಗಿರುವಾಗಲೇ ಸಂಶೋಧನಾ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು `ಸೇಡಂ ಐತಿಹಾಸಿಕ ಸ್ಮಾರಕಗಳು, ಸೇಡಿಂಬ ದುರ್ಗದ ಶಾಸನಗಳು, ಸೇಡಂ ತಾಲ್ಲೂಕು ದರ್ಶನ, ಮನ್ನೆದಡಿ ಸಾಸಿರ ನಾಡು, ಮಾನ್ಯಖೇಟದ ಸಿರಿ, ಆಳಂದ ಸಾಸಿರ ನಾಡು, ಕಾಳಗಿ ಕಾಳೇಶ್ವರ, ಮಾನ್ಯಖೇಟ'. (ಸಂಶೋಧನಾ ಕೃತಿಗಳು) `ಸ್ವಾಭಿಮಾನ- ೧.೨, `ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಜಿ,’ ಮತ್ತು `ಆಲ್ಲೂರಿನ ಕೆಂಚ ವೃಷಭೇಂದ್ರ ಶ್ರೀಗಳು' (ಚರಿತ್ರೆಗಳು) `ಸಂಗೀತ ಸಂಪದ' (ವ್ಯಕ್ತಿ ಚಿತ್ರಗಳು) `ಭಾವೈಕ್ಯದ ಕ್ಷೇತ್ರ ಮಳಖೇಡ ದರ್ಗಾ' (ಲೇಖನ) `ಸಾಹಿತ್ಯ ಚಿಲುಮೆ' (ಸಂಪಾದನೆ) ಇತ್ಯಾದಿ ೧೮ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಂಶೋಧನಾ, ಲೇಖನ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ೨೦ವರ್ಷಗಳಿಂದ ಸೇಡಂ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಮತ್ತು ಒಂದು ಅವಧಿಗೆ ಕಸಾಪ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಸಾಪ ಅವಧಿಯಲ್ಲಿ ಒಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಹಲವು ಹೋಬಳಿ, ಗ್ರಾಮ ಮಟ್ಟದ ಸಾಹಿತ್ಯ ಸಮ್ಮೇಳನ ಹಾಗೂ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇವರಿಗೆ ೨೦೦೯ರಲ್ಲಿ ಕಲಬುರಗಿ ಜಿಲ್ಲಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೯ರಲ್ಲಿ ಸೇಡಂ ತಾಲ್ಲೂಕಿನ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಅಷ್ಟೇಯಲ್ಲದೆ ಇವರಿಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಸೇಡಂ ತಾಲ್ಲೂಕಿನಲ್ಲಿ ವಾಸವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ