ಪುಟಗಳು

ಶನಿವಾರ, ಜನವರಿ 11, 2025

ಬಿ.ಜಿ.ಸಿದ್ದಬಟ್ಟೆ

ಅನುವಾದಕರಾಗಿ ಗುರುತಿಸಿಕೊಂಡು ಕೆಲ ಕೃತಿಗಳು ಪ್ರಕಟಿಸಿದ ಹಿರಿಯ ಲೇಖಕರೆಂದರೆ, ಬಿ.ಜಿ.ಸಿದ್ದಬಟ್ಟೆಯವರು. ಇವರು ಬೀದರ ಜಿಲ್ಲೆ ಬಾರಹಳ್ಳಿ ಔರಾದನ ಗಳಂಗಳಪ್ಪ ಸಿದ್ದಬಟ್ಟೆ ಮತ್ತು ಶಂಕರಮ್ಮ ದಂಪತಿಗಳಿಗೆ ದಿನಾಂಕ ೧೪-೮-೧೯೪೦ರಲ್ಲಿ ಜನಿಸಿದ್ದಾರೆ. ಹಿಂದಿ ಭಾಷೆಯ ವಿದ್ವಾಂಸರಾದ ಇವರು ಬಿ.ಎಡ್, ಡಿಪ್ಲೊಮಾ ಇನ್ ತೆಲುಗು ಲಾಂಗ್ವೇಜ್‌ನಲ್ಲಿ ಮುಕ್ತ ವಿಶ್ವವಿದ್ಯಾಲಯದ ಮೂಲಕ ಅಧ್ಯಯನ ಮಾಡಿ ಕನ್ನಡ, ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು ಭಾಷಾ ಪಾಂಡಿತ್ಯವನ್ನು ಹೊಂದಿದ್ದಾರೆ. ಮತ್ತು ಕರ್ನಾಟಕ ಏಕೀಕರಣ ಸಂಧರ್ಭದಲ್ಲಿ ಕನ್ನಡಕ್ಕಾಗಿ ಹೋರಾಡಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ 'ಯುವ ಘರ್ಜನೆ' ಪತ್ರಿಕೆಯನ್ನು ಹುಟ್ಟು ಹಾಕಿ ಕನ್ನಡ ಏಕಿಕರಣ ಸಂದರ್ಭದಲ್ಲಿ ಬರವಣಿಗೆಯ ಮೂಲಕ ಛಾಪು ಮೂಡಿಸಿ ಬೀದರ ಜಿಲ್ಲೆಯಲ್ಲಿ ಮೊದಲ ಕನ್ನಡ ಪತ್ರಿಕೆ ಪ್ರಾರಂಭಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಿನ ಆ ಪತ್ರಿಕೆಯ ಮೂಲಕ ಎಡಪಂಥೀಯ ವಿಚಾರಧಾರೆಗೆ ಮಾರುಹೋಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. `ನಾಮಾಂತರ ' ಮತ್ತು `ಘಟಸ್ಪೋಟ' ಎಂಬ ಮರಾಠಿ ಕಾದಂಬರಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಪ್ರೌಢ ಶಾಲಾ ಭಾಷಾ ಪಂಡಿತರಾಗಿ, ಶಾಲಾ ತನಿಖಾಧಿಕಾರಿಯಾಗಿ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ `ಕಾವ್ಯ ಕಿಶೋರ್' ಎಂಬ ಕಾವ್ಯನಾಮದಿಂದ ಬರಹಗಳನ್ನು ಬರೆದಿದ್ದಾರೆ. ಮತ್ತು ಕರ್ನಾಟಕ ಸ್ಟೇಟ್ ಎಜುಕೇಶನ್ ಪೇಡ್ರೆಶನ, ಬೆಂಗಳೂರು. ಮತ್ತು ಆಲ್ ಇಂಡಿಯಾ ಪೆಡ್ರೇಶನ್ ಆಫ್ ಎಜುಕೇಷನಲ್, ಆಶೋಸಿಯಷನ್ ಎಗ್ಜಿಗೇಟಿವ್ ಕೌನ್ಸಿಲರ್ ಆಗಿ ಕೆ.ಎಸ್.ಇ.ಎ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೦ ರಲ್ಲಿ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದ `ಕಾಮನ್ ವೆಲ್ತ್ ರಾಷ್ಟ್ರಗಳ ಕೌನ್ಸಿಲ್ ಆಫ್ ಎಜುಕೇಶನ್ ಅಡ್ಮಿನಿಸ್ಟ್ರೇಶನ್' ಎಂಬ ಅಂತರಾಷ್ಟ್ರೀಯ ಮಟ್ಟದ ಕಮ್ಮಟದಲ್ಲಿ ಪಾಲ್ಗೊಂಡು ಕರ್ನಾಟಕ ಮೂಲದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಷ್ಟೇಯಲ್ಲದೆ ದೆಹಲಿಯಲ್ಲಿ ನಡೆದ `ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಜಾಗತಿಕ ಮಟ್ಟದಲ್ಲಿ ಸನ್ಮಾನಿತರಾಗಿದ್ದರಿಂದ ಇವರಿಗೆ ರಾಜ್ಯ, ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ