ಭಾನುವಾರ, ಜನವರಿ 12, 2025
ಶಿವಕುಮಾರ ನಾಗವಾರ
ಕತೆಗಾರ ಶಿವಕುಮಾರ ನಾಗವಾರ. ಇವರು ಬೀದರ ತಾಲೂಕಿನ ಮರಕುಂದಾ ಗ್ರಾಮದ ಮಡಿವಾಳಯ್ಯ ಮತ್ತು ಕಾಶೆಮ್ಮ ದಂಪತಿಗಳಿಗೆ ದಿನಾಂಕ ೧೨-೮-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ. ಡಿ.ಫಾರ್ಮ ಸ್ನಾತಕೋತ್ತರ ಪದವಿ ಪಡೆದು ಬೀದರದ ಕಾಶಿನಾಥರಾವ ಬೆಲೂರೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಹಣದಿ', `ಏಳೂರ ಸರಪಂಚ', `ಮನಸ್ಸು ಮಾತಾಡಿದಾಗ' (ಕಥಾಸಂಕಲನಗಳು) `ಚೆನ್ನಬಸವಣ್ಣನವರು' (ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಹಲವು ಕತೆಗಳು ರಾಜ್ಯ ಮಟ್ಟದ ಕಥಾಸ್ವರ್ಧೆಯಲ್ಲಿ ಬಹುಮಾನಗಳು ಪಡೆದು ಹೆಸರುವಾಸಿಯಾಗಿವೆ. ಅವುಗಳೆಂದರೆ,೧೯೮೭ ರಲ್ಲಿ ತರಂಗ ಕಥಾ ಸ್ಪರ್ಧೆಯಲ್ಲಿ ಇವರ `ಬನ್ಯಾ' ಕತೆ, `೧೯೯೪ರಲ್ಲಿ ಉತ್ಥಾನ ಮಾಸಪತ್ರಿಕೆಯಲ್ಲಿ `ಹಗಲುಗಳಾಗಿ ರಾತ್ರಿಗಳು' ಮತ್ತು ಅದೆ ಪತ್ರಿಕೆಯು ೧೯೯೬ರಲ್ಲಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ `ಹುಳುಚು' ಎಂಬ ಕತೆ. ಹಾಗೂ ೨೦೦೨ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯವರ ತಿಂಗಳ ಕಥಾ ಸ್ಪರ್ಧೆಯಲ್ಲಿ `ಹಡದಿ' ಕತೆ ಇವುಗಳು ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರೆ, ೧೯೯೫ರಲ್ಲಿ ಉತ್ಥಾನ ಮಾಸಪತ್ರಿಕೆಯವರು ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ `ಬಾಬಡಿ' ಎಂಬ ಕತೆ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ೧೯೮೮ರಲ್ಲಿ ಪ್ರಜಾವಾಣಿಯ ಕಥಾ ಸ್ಪರ್ಧೆಯಲ್ಲಿ `ಟುಮ್ಯಾ' ಮತ್ತು ೧೯೯೭ರಲ್ಲಿ `ನೆಲ ಹಿಡಿಯುವ ಮುನ್ನ' ಕತೆಗಳು ಬಹುಮಾನ ಪಡೆದು ಪ್ರಕಟವಾಗಿವೆ. ೧೯೯೨ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಏರ್ಪಡಿಸಿದ ದತ್ತಿ ಕಥಾ ಸ್ಪರ್ಧೆಯಲ್ಲಿ ಇವರ `ಸತ್ಯ' ಕತೆ ಬಹುಮಾನ ಪಡೆದಿದೆ. ಮತ್ತು ೨೦೦೦ ರಲ್ಲಿ ಇವರ `ಹಣದಿ' ಕಥಾಸಂಕಲನಕ್ಕೆ ಉದಯವಾಣಿ ಪತ್ರಿಕೆಯವರಿಂದ ಪುಸ್ತಕ ಬಹುಮಾನ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಇವರ `ಏಳೂರು ಸರಪಂಚ' ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ, ೨೦೦೯ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಮನಸ್ಸು `ಮಾತಾಡಿದಾಗ ' ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ೨೦೦೩ರಲ್ಲಿ ಇವರ `ಹಗಲುಗಳಾಗಿ ರಾತ್ರಿಗಳು' ಎಂಬ ಕತೆ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಮತ್ತು `ಹರಿದ ಕಾಗದದ ಚೂರುಗಳು' ಎಂಬ ಕತೆ ಬಿ.ಬಿ.ಎಂ.ವಿದ್ಯಾರ್ಥಿಗಳಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಠ್ಯ ಪುಸ್ತಕಗಳಾಗಿವೆ. ಮತ್ತು ಇವರ ಕತೆಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೨೦೧೪-೧೫ನೇ ಸಾಲಿನ ಪಿ.ಯು.ಸಿ.ದ್ವಿತೀಯ ವರ್ಷದ ಕನ್ನಡ ಪಠ್ಯಕ್ರಮದ ರಚನಾ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯು ಇವರು ೨೦೧೪ರಿಂದ ೨೦೧೭ ರವರೆಗೆ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ತಮ್ಮ ಹುಟ್ಟೂರಿನಲ್ಲಿ ಚಾಲುಕ್ಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ