ಪುಟಗಳು

ಶನಿವಾರ, ಜನವರಿ 11, 2025

ಪೂಜ್ಯ. ಶ್ರೀ. ಸಿದ್ದರಾಮ ಶರಣರು ಬೆಲ್ದಾಳ.

೧೯ನೇ ಶತಮಾನದ ನಂತರದಲ್ಲಿ ವಚನ ಸಾಹಿತ್ಯ ಮತ್ತು ಅವುಗಳ ದೈತ್ಯ ವಿಶ್ಲೇಷಣೆಯ ಮೂಲಕ ಬೀದರ ಜಿಲ್ಲೆಯಿಂದ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಅಗ್ರಗಣ್ಯ ಲೇಖಕರು, ಚಿಂತಕರು, ಮತ್ತು ಶರಣರು ಎಂದರೆ ಪೂಜ್ಯ. ಶ್ರೀ. ಸಿದ್ದರಾಮ ಶರಣರು ಬೆಲ್ದಾಳ ಇವರ ಮೂಲನಾಮ `ವಿಠ್ಠಲ' ಎಂದಾಗಿದ್ದು, ಅದು ಮುಂದೆ ಇವರ ಶರಣತತ್ವ ಆಚಾರ ವಿಚಾರಗಳಲ್ಲಿಯ ಪ್ರಬುದ್ಧತೆಯನ್ನು ಅರಿತ ಕನ್ನಡದ ಸಂತ ಭಾಲ್ಕಿಯ ಡಾ.ಚನ್ನಬಸವ ಪಟ್ಟದೇವರು ಭಕ್ತಿಗೆ ಮೆಚ್ಚಿ ಸೊನ್ನಲಾಪುರದ ಸಿದ್ದರಾಮೇಶ್ವರರೆ ನೀವೆಂದು ತೋಳ ತೆಕ್ಕೆಯಲ್ಲಿ ಅಪ್ಪಿಕೊಂಡು `ಸಿದ್ದರಾಮ' ಎಂದು ಮರುನಾಮಕರಣ ಮಾಡಿದ್ದರೆಂದು ಭಾಲ್ಕಿ ಶ್ರೀಗಳ ಚರಿತ್ರೆಯಿಂದ ತಿಳಿದುಬರುತ್ತದೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಮಧ್ಯದಲ್ಲಿ ಬರುವ ಬೆಳ್ದಾಳ ಗ್ರಾಮದ ಶ್ರೀ ಲಾಲಪ್ಪ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ದಂಪತಿಗಳ ಉದರದಲ್ಲಿ ೧೯೪೭ ಫೆಬ್ರುವರಿ ತಿಂಗಳ ಮಹಾಶಿವರಾತ್ರಿ ದಿನದಂದು ಜನ್ಮ ತಳೆದಿದ್ದಾರೆ. ಕನ್ನಡ ಭಾಷೆ ಮತ್ತು ವಚನ ಸಾಹಿತ್ಯದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ ಇವರು ಓದಿದ್ದು ಕೇವಲ ಮೂರನೇ ತರಗತಿಯವರೆಗೆ ಮಾತ್ರ. ಆದರೆ ಶ್ರೀಗಳು ಸತತ ವಚನ ಸಾಹಿತ್ಯದ ಅಧ್ಯಯನದ ಮೂಲಕ ಸ್ವತಃ ಅವರೇ ಬರೆವಣಿಗೆಯಲ್ಲಿ ತೊಡಗಿಸಿಕೊಂಡು ಮೌಲ್ಯಧಾರಿತ ವಚನ ಸಂಪುಟಗಳೊAದಿಗೆ ೧೫ ಕೃತಿಗಳು ಹೊರತಂದು ನಾಡಿನಾದ್ಯಂತ ತುಂಬ ಹೆಸರು ವಾಸಿಯಾಗಿದ್ದಾರೆ. ಇವರು ಬರೆದ ಕೃತಿಗಳೆಂದರೆ , ಶೂನ್ಯ ಸಂಪಾದನೆಯ ರಹಸ್ಯ-೧.೨.೩.೪. ಸಂಪುಟಗಳು, `ವಚನ ತತ್ವಾನುಭವ, ಭಗವಾನ್ ಬುದ್ಧ, ಶರಣರ ಬೆಡಗಿನ ವಚನಗಳು, ಷಟಸ್ಥಲ ಸಂಪತ್ತು, ಬೆಳಗಿನ ಇಷ್ಟಲಿಂಗಾರ್ಚನೆ ವಿಧಾನ, ಕರುಳ ಕಲೆ, ಬಸವಣ್ಣನವರ ವಚನಕ್ಕೆ ವ್ಯಾಖ್ಯಾನ, ವಚನಗಳಲ್ಲಿ ಶಿವಯೋಗ’ ಇವು ಅವರ ಪ್ರಮುಖ ಕೃತಿಗಳಾಗಿವೆ. ಇವರ ಶರಣ ಸಾಹಿತ್ಯ ಮತ್ತು ಅದರ ತತ್ವನಿಷ್ಠೆಗೆ ಮೆಚ್ಚಿ, ಚಿತ್ರದುರ್ಗದ ಶ್ರೀ ಮುರುಘಾ ಮಠದಿಂದ ಮೊಟ್ಟ ಮೊದಲನೆಯ ಬಸವಶ್ರೀ ಪ್ರಶಸ್ತಿ ಮತ್ತು ೧ ಲಕ್ಷ ರೂಪಾಯಿ ಗೌರವಧನವು ನೀಡಿ ಗೌರವಿಸಿದ್ದಾರೆ. ಮತ್ತು ಅನುಭವ ಮಂಟಪ ಪ್ರಶಸ್ತಿ, ಕಂಬಳಿವಾಲೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ. ೧೯೮೧ರಲ್ಲಿ ಕೌಠಾ (ಬಿ) ಗ್ರಾಮದಲ್ಲಿ ಬಸವ ಯೋಗಾಶ್ರಮವು ಸ್ಥಾಪಿಸಿ ಅದಕ್ಕೆ `ಮಾದರ ಚನ್ನಯ್ಯ ಪ್ರಸಾದ್ ನಿಲಯ' ಎಂಬ ಮರುನಾಮಕರಣವು ಮಾಡಿದ್ದಾರೆ. ಅಷ್ಟೇಯಲ್ಲದೆ ತಮ್ಮ ಆಶ್ರಯದಲ್ಲಿಯೇ ಶರಣ ಹರಳಯ್ಯನ ಹೆಸರಿನಲ್ಲಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಮತ್ತು ಪದವಿ ಮಹಾವಿದ್ಯಾಲಯಗಳನ್ನು ತೆರೆದು ಬಡ ಮತ್ತು ಮಾಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣವು ನೀಡುವುದರೊಂದಿಗೆ ತಮ್ಮ ವಚನ ಸಾಹಿತ್ಯ ರಚನೆಯನ್ನು ಮುಂದುವರೆಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ