ಪುಟಗಳು

ಶನಿವಾರ, ಜನವರಿ 11, 2025

ಎಚ್.ಕಾಶಿನಾಥ ರೆಡ್ಡಿ

ಹಿರಿಯ ಸಾಹಿತಿ ಎಚ್.ಕಾಶಿನಾಥ ರೆಡ್ಡಿಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಣಕುಣಿ ಗ್ರಾಮದ ಗುಂಡಾರೆಡ್ಡಿ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೫-೧-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ. ಎಂ.ಎ.ಇತಿಹಾಸ. ಎಂ.ಎ.ಪತ್ರಿಕೋದ್ಯಮ ಪದವಿಧರರಾದ ಇವರು ೧೯೮೦ರಲ್ಲಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಾಗಿ, ಪಿ.ಯು. ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೦೫ರಲ್ಲಿ ನಿವೃತ್ತರಾಗಿದ್ದಾರೆ. ೧೯೯೪ರಲ್ಲಿ `ಕೋರಿಕೆ' (ಕವನಸಂಕಲನ) ೨೦೧೭ರಲ್ಲಿ `ಶಿಶು ಕಾವ್ಯ ಶತಕ' (ಮಕ್ಕಳ ಕವನ ಸಂಕಲನ) `ವಚನ ಕಾಶಿ' (ಆಧುನಿಕ ವಚನ) `ಸಾಹಿತ್ಯ ಸುರಭಿ' (ಲೇಖನ) `ಭೂ ಕೈಲಾಸ’, `ಚಂದ್ರ ಶಿರೋಮಣಿ' (ಸಣ್ಣಾಟಗಳು) `ಕಾಯಕ ವೀರ ಮೊಳಿಗೆ ಮಾರಯ್ಯಾ', `ವೀರಭದ್ರೇಶ್ವರ ಚರಿತ್ರೆ' (ಚರಿತ್ರೆಗಳು) `ಹುಮನಾಬಾದ ತಾಲೂಕು ದರ್ಶನ' ಎಂಬ ಕೃತಿಗಳು ರಚಿಸಿದರೆ, `ಹರ್ಡೇಕರ ಮಂಜಪ್ಪನವರ ಜನಸೇವಕನ ವಚನಗಳು', `ಶಿಲ್ಲಪ್ಪ ಕವಿಯ ಬದುಕು ಬರಹ', `ನಿಜಲಿಂಗ ಭದ್ರೇಶ್ವರ ಅನುಭವ ಪದಗಳು', `ಕಲ್ಯಾಣ ನಾಡಿನ ಪರಂಜ್ಯೋತಿ', `ಆಚರಣೆಯ ಹಾಡುಗಳು', `ಕುಕ್ಕೆನ ಹೂ', `ಬಹುಭಾಷಾ ಕಾವ್ಯಧಾರೆ', `ಮಂಗಳ ಮಂಗಳಾರತಿ ಪದಗಳು' (ಸಂಪಾದನೆ) 'ಕಲ್ಯಾಣ ಕಲಾ ಶ್ರೀ', `ಸಮರಸ', `ಮೈತ್ರಾ ಛಾಯಾ' (ಅಭಿನಂದನಾ ಗ್ರಂಥಗಳು) ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಭೂ ಕೈಲಾಸ’ ಮತ್ತು `ಚಂದ್ರ ಶಿರೋಮಣಿ' ಎಂಬ ಸಣ್ಣಾಟಗಳು ಗುಲ್ಬರ್ಗ ಮತ್ತು ಕೊಲ್ಹಾಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಪ್ರಕಟವಾಗಿದ್ದವು. ೧೯೭೪ರಲ್ಲಿ ಬೆಂಗಳೂರಿನ ಕಸಾಪ ಏರ್ಪಡಿಸಿದ ರಾಜ್ಯ ಮಟ್ಟದ ವಚನಗಳ ಕಂಠಪಾಠ ಸ್ಪರ್ಧೆಯಲ್ಲಿ ಸರ್ವಜ್ಞನ ೧೧೧೧ ವಚನಗಳು ಏಕಕಾಲದಲ್ಲಿಯೆ ನಿಂತು ಪಟಪಟಾಂತ ಅರಳು ಹುರಿದಂತೆ ಉಚ್ಚಾರಿಸಿ ಯಾರು ಮಾಡದ ದಾಖಲೆ ಮಾಡಿದ್ದರಿಂದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ೧೯೯೨ರಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ೧೯೯೯ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ೨೦೦೪ರಲ್ಲಿ ಆದರ್ಶ ಉಪನ್ಯಾಸಕ ಪ್ರಶಸ್ತಿಗಳು ಪಡೆದಿದ್ದಾರೆ. ೧೯೮೭ರಿಂದ ೧೯೯೦ರವರೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ ಇವರಿಗೆ ಹುಮನಾಬಾದಿನಲ್ಲಿ ನಡೆದ ೨ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಮತ್ತು ೨೦೧೨ರಲ್ಲಿ ನಡೆದ ಬೀದರ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ