ಪುಟಗಳು

ಭಾನುವಾರ, ಜನವರಿ 12, 2025

ಆರ್.ಕೆ.ಹುಡಗಿ

ಹಿರಿಯ ಬಂಡಾಯ ಸಾಹಿತಿ ಆರ್.ಕೆ.ಹುಡಗಿಯವರ `ಪೂರ್ಣನಾಮ ರಾಮಶೆಟ್ಟಿ ತಂದೆ ಕರಿಬಸಪ್ಪಾ ಹುಡಗಿ' ಎಂದಾಗಿದೆ. `ರಾಹು' ಎಂಬುದು ಇವರ ಕಾವ್ಯನಾಮವಾಗಿದೆ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬಿ ಗ್ರಾಮದ ಕರಿಬಸಪ್ಪಾ ಮತ್ತು ವೀರಮ್ಮಾ ದಂಪತಿಗಳಿಗೆ ದಿನಾಂಕ ೧-೯-೧೯೪೮ರಲ್ಲಿ ಜನಿಸಿದ್ದಾರೆ. ಎಂ.ಎ. ಇಂಗ್ಲೀಷ್ ಸ್ನಾತಕೋತ್ತರ ಪದವಿಧರರಾದ ಇವರು ೧೯೭೪ರಲ್ಲಿ ಕಲಬುರಗಿಯ ಪಿ.ಡಿ.ಎ.ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಹುಟ್ಟು ಹೋರಾಟಗಾರರಾದ ಇವರು ಎಡಪಂಥೀಯ ವಿಚಾರಗಳಿಂದ ಪ್ರತಿಭಟಿಸುತ್ತಾ ಬೆಳೆದವರು. ಮತ್ತು ಆ ವಿಚಾರಧಾರೆಗಳಿಂದ ಸಾಹಿತ್ಯವು ರಚಿಸಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಇವರು ಬರೆದ ಕೆಲ ಕೃತಿಗಳೆಂದರೆ, `ಈರೋಬಿ' (ಗೀತ ನಾಟಕ) 'ಬಾಯಿಂದ ಬಾದಶಹ ಪುರಾಣ', `ಹೆಮ್ಮಾರಿಯ ರಸ ಪುರಾಣ', `ಪ್ರಳಯಾಂತಕ ಪ್ರತಿಕಾರ', `ಅಸಮಾನತೆಯ ಅಸುರಿ ಮುಖಗಳು', `ಸಂಸ್ಥಾ' (ರಂಗನಾಟಕ) `ಬರದ ಬಯಲಾಟ'. `ಅಕ್ಷರ' `ಒರೆಗಲ್ಲು'. `ಪಾದಚಾರಿಯ ಪುರಾಣ' `ಸಾಕು ನಾಯಿ' `ಜ್ಯೊಲ್ಯಾ ನಾಯಿ' `ಬತ್ತಲೆ ಎಲ್ಲವ್ವನ ವಸ್ತ್ರಾಪಹರಣ' `ಅನ್ನದಾತನ ಅರ್ತನಾದ' `ಅನಾಮಿ ಪಿಂಡದ ಅರ್ತನಾದ' `ನರಗುಂದ ರೈತನ ಬಂಡಾಯ' `ಗುರು ಸಾರಥಿ- ಶಿಷ್ಯ ಅತಿಥಿ' `ಭಗಾವತ್ ಗೀತೆ' (ಬೀದಿ ನಾಟಕಗಳು) ಬರೆದು ಪ್ರದರ್ಶಿಸಿದ್ದಾರೆ. ಈ ನಾಟಕಗಳು ಸಂಸ್ಕೃತ ಜಾಥ, ವಿಜ್ಞಾನ ಜಾಥ,ಅಕ್ಷರ ಜಾಥ,ಬರಗಾಲ ಜಾಥ,ಮಹಿಳಾ ಜಾಥಾ,ಭ್ರಷ್ಟಾಚಾರ ವಿರುದ್ಧದ ಜಾಥಾ ಸೇರಿದಂತೆ ಹಲವಾರು ಕಡೆಗಳಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ೧೬೬೫ ಪ್ರದರ್ಶನಗಳು ಕಂಡು ಜನ ಮೆಚ್ಚುಗೆ ಪಡೆದಿವೆ. ಅಷ್ಟೇಯಲ್ಲದೆ ಇವರು ಉತ್ತಮ ಅನುವಾದಕರು ಆಗಿದ್ದರಿಂದ ಇಂಗ್ಲೀಷ್, ಮರಾಠಿ, ಹಿಂದಿ ಭಾಷೆಯ ಕೃತಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನೇಕೆ ನಾಸ್ತಿಕ (ಭಗತ್ ಸಿಂಗ) ವಿಮೋಚನೆಯ ದಾರಿ, (ಇ.ಎಂ.ಎನ್.ಎನ್) ವಿಮೋಚನೆಯೆಡೆಗೆ (ಮೈಥಿಲಿ ಶಿವರಾಮನ್) ಸಮರ್ಥ ಸಾಮ್ಯವಾದಿ (ಲಿವು-ಶಾವೊಕಿ) ಜ್ಯೋತಿ ಬಸು, (ಸುರಭಿ ಬ್ಯಾನರ್ಜಿ) ದಲಿತ ಸಂಘರ್ಷ: ದಾರಿ-ದಿಕ್ಕು (ಆನಂದ ತೇಲತುಂಬ್ಡೆ), ದಲಿತರು :ಭೂತ-ಭವಿಷ್ಯ, (ಆನಂದ ತೇಲತುಂಬ್ಡೆ) ಜಾತಿ ವ್ಯವಸ್ಥೆ- ಸಮಸ್ಯೆ ಸವಾಲುಗಳು, (ಬಾಬು ಜಗಜೀವನರಾಮ), ಜಾತಿ ವ್ಯವಸ್ಥೆ:- ಉಗಮ-ವಿಕಾಸ-ವಿನಾಶ (ಡಾ.ಬಿ.ಆರ್.ಅಂಬೇಡ್ಕರ್) ಮೈ ಫ್ಯುಡಲ್ ಲಾರ್ಡ್ ತೆಹಮಿನಾ ದುರ್ರಾನಿ ಅವರ ಆತ್ಮಕಥನ ‘ಆರನೆ ಹೆಂಡತಿಯ ಆತ್ಮಕಥನ‘, ಪೀಠಾಧಿಪತಿಯ ಪತ್ನಿ, ತುರಣ್ ತೇಜಪಾಲ್ ಅವರ ‘ದಿ ಅಲ್ಕೆಮಿ ಆಫ್ ಡಿಸೈರ್’ ‘ಕಾಮರಾಸಾಯನ ಶಾಸ್ತ್ರ’ ಬೆಸ್ಟ್ಸೆಲ್ಲರ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ೧೯೭೬ ರಲ್ಲಿ ಕಲಬುರಗಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯರಾಗಿ,೧೯೮೬ರಲ್ಲಿ ೧೦೦ ಅಡಿಗಳ ಬಣ್ಣದ ಜಾಗದಲ್ಲಿ ಸಂಘಟಕರಾಗಿ, ೧೯೯೧ ಸಾಕ್ಷರತೆ ಜಾಥ,೧೯೯೨ರಲ್ಲಿ ಜನವಿಜ್ಞಾನ ಜಾಥ, ೨೦೦೫ರಲ್ಲಿ ಭ್ರೂಣ ಹತ್ಯೆ ವಿರುದ್ಧ ಪ್ರಚಾರ ಜಾಥ, ೨೦೦೯ರಲ್ಲಿ ರೈತ ಪರ ಜಾಥಗಳಲ್ಲಿ ಲೇಖಕ ಮತ್ತು ಸಂಘಟಕರಾಗಿ ಸೇವೆ ಸಲ್ಲಿಸಿದ ಇವರು ೨೦೧೧ರಲ್ಲಿ ನಾಡಿನ ನೆಲ-ಜಲ ಉಳಿಸಲು ಬೀದರನಿಂದ ಬಳ್ಳಾರಿವರೆಗೆ ಸಂಘಟಕರಾಗಿ ಹೋರಾಟ ಮಾಡಿದ್ದಾರೆ. ಮತ್ತು ೧೯೮೫ರಿಂದ ೧೯೯೩ವರೆಗೆ ೧೯೯೮ರಿಂದ ೨೦೦೫ವರೆಗೆ ಕೋಮು ಸೌಹಾರ್ದತೆಗಾಗಿ ರಂಗೋತ್ಸವಗಳ ಸಂಘಟಕರಾಗಿ ದುಡಿದಿದ್ದಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಶತಮಾನೋತ್ಸವದ ಸಂದರ್ಭದಲ್ಲಿ ೧೧೭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿದ್ದಾರೆ. ೧೯೮೭ರಲ್ಲಿ ಬಿಜಾಪುರ ಜಿಲ್ಲೆಯಲ್ಲಿಯ ದೇವದಾಸಿ ಪದ್ದತಿಯ ವಿರುದ್ಧ ಒಂದು ತಿಂಗಳ ಕಾಲ ಜೋಗತಿ ನಾಟಕ ಪ್ರದರ್ಶನ ಸಂಘಟರಾಗಿದ್ದರು. ೧೯೭೭ರಿಂದಲೂ ಸಮುದಾಯ ಸಕ್ರಿಯ ಸದಸ್ಯರಾಗಿ, ಪೀಪಲ್ ಸೋಸಿಯೊ ಕಲ್ಚರಲ್ ಆರ್ಗನೈಸೇಷನ್ ಅಧ್ಯಕ್ಷರಾಗಿ, ಇಂಡೋ-ಸೋವಿಯತ್ ಕಲ್ಚರಲ್ ಸೊಸೈಟಿ ಕಲಬುರಗಿ ವಿಭಾಗದ ಅಧ್ಯಕ್ಷರಾಗಿ ೧೯೮೪ರಿಂದ ೧೯೯೦ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಹಾಗೂ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಯುನಿಯನ್ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷರಾಗಿ ಸುಮಾರು ೨೭ವರ್ಷ ಸೇವೆ ಸಲ್ಲಿಸಿದ್ದಾರೆ. ಮತ್ತು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷರಾಗಿ, ಭಾರತ ಜ್ಞಾನ-ವಿಜ್ಞಾನ ಸಮಿತಿಯ ಅಧ್ಯಕ್ಷರಾಗಿ, ಕಲಬುರಗಿ ಸಮುದಾಯ ಘಟಕದ ಅಧ್ಯಕ್ಷರಾಗಿ, ಉತ್ತರ ವಲಯದ ಕಾರ್ಯದರ್ಶಿ, ಹಾಗೂ ೨೦೦೬ರಿಂದ ರಾಜ್ಯ ಸಮುದಾಯದ ಅಧ್ಯಕ್ಷರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಶುದ್ಧೀಕರಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ೧೯೭೯-೮೦ರಲ್ಲಿ ಕಲಬುರಗಿ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿ, ಗುಲಬರ್ಗಾ ರಾಜಕೀಯ ಶಾಂತಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೫ರಲ್ಲಿ ಕಲಬುರಗಿ ಮೊದಲ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ೧೯೯೮ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ. ೨೦೧೨ರಲ್ಲಿ ಇವರ `ಕಾರ್ಪೊರೇಟ್ ಕಾಲದಲ್ಲಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮತ್ತು ೨೦೧೫ರಲ್ಲಿ ಇವರು ಮಾಡಿದ ಭಾಷಾಂತರ ಜೀವಮಾನ ಸಾಧನೆಗೆ `ಕುವೆಂಪು ಭಾಷಾ ಭಾರತಿ ಪ್ರಶಸ್ತಿ'ಯು ಲಭಿಸಿದೆ. ಸದ್ಯ ಇವರು ಕಲಬುರಗಿ ನಿವಾಸಿಯಾಗಿದ್ದು ಇಳಿ ವಯಸ್ಸಿನಲ್ಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಮತ್ತು ಸಾವಿರಾರು ಮಹತ್ವದ ಪುಸ್ತಕಗಳು ಸಂಗ್ರಹಿಸಿದ ಮಹಾನ್ ಪುಸ್ತಕ ಪ್ರೇಮಿಯು ಇವರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ