ಪುಟಗಳು

ಶುಕ್ರವಾರ, ಜನವರಿ 10, 2025

ಮಚ್ಚೇಂದ್ರ ಪಿ.ಅಣಕಲ್

ದಲಿತ ಬಂಡಾಯ ಕತೆಗಾರರಾಗಿ ನಾಡಿನಾದ್ಯಂತ ಪರಿಚಿತರಾದ ಸಾಹಿತಿ ಮಚ್ಚೇಂದ್ರ ಪಿ ಅಣಕಲ್. ಇವರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಪಂಡಿತ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೧೨-೬-೧೯೭೯ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಇಡಿ. ಎಂ.ಎ. ಎಂ.ಇಡಿ. ಎಂ.ಎ. ಪತ್ರಿಕೊದ್ಯಮ ಪದವಿಧರರಾದ ಇವರು ೧೨ವರ್ಷ ಪೋಟೋಗ್ರಾಫರಾಗಿ ೫ವರ್ಷ ಮುಡಬಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ, ೪ವರ್ಷ ಮುಡಬಿ ಪಿ.ಯು.ಕಾಲೇಜಿನ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಎಪ್ರೀಲ್ ೧. ೨೦೧೬ರಿಂದ ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತುಂಬ ಆಸಕ್ತರಾಗಿ ಕತೆ, ಕವನ, ಲೇಖನ, ಬರಹಗಳು ಬರೆದು ೧೯೯೯ರಲ್ಲಿ `ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು’ (ಕವನಸಂಕಲನ) ೨೦೦೦ರಲ್ಲಿ `ಜ್ಞಾನ ಸೂರ್ಯ’ (ಸಂಪಾದಿತ ಕಾವ್ಯ) ೨೦೦೯ರಲ್ಲಿ `ಲಾಟರಿ’ ೨೦೧೧ರಲ್ಲಿ `ಮೊದಲ ಗಿರಾಕಿ’ ೨೦೧೯ರಲ್ಲಿ `ಹಗಲುಗಳ್ಳರು’ (ಕಥಾ ಸಂಕಲನಗಳು) ೨೦೧೨ರಲ್ಲಿ `ಜನಪದ ವೈದ್ಯರ ಕೈಪಿಡಿ’ (ಸಂಪಾದನೆ) ೨೦೨೦ರಲ್ಲಿ `ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ (ಅಂಕಣ) ಎಂಬ ಕೃತಿಗಳು ಪ್ರಟಿಸಿದ್ದಾರೆ. ಮತ್ತು `ಗೌರ್ಮೆಂಟ ಸರ್ವೆಂಟನ ಹೆಂಡತಿ’ (ಲಲಿತ ಪ್ರಬಂಧ) `ಇವಾ ನಮ್ಮವನಾಗಲಿಲ್ಲ’ (ಕವನಸಂಕಲನ) `ಬೀದರ ಜಿಲ್ಲೆಯ ಬಹುಮಾನಿತ ಕತೆಗಳು’ (ಸಂಪಾದನೆ) ಇತ್ಯಾದಿ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಇವರ ಕತೆ ಕವನ ಲೇಖನ ಪ್ರಬಂಧಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಉದಯವಾಣಿ, ತುಷಾರ, ತರಂಗ, ಕರ್ಮವೀರ ಸಂಯುಕ್ತ ಕರ್ನಾಟಕ, ಮುಂಬೈಯ ಕರ್ನಾಟಕ ಮಲ್ಲ, ಸಾಹಿತ್ಯ ಸಿಂಚನ, ಹಸಿರು ಕ್ರಾಂತಿ, ಕರ್ನಾಟಕ ಸಂಧ್ಯಾ ಕಾಲ, ಕೆಂಡ ಸಂಪಿಗೆ, ಬುಕ್ ಬ್ರಹ್ಮ ಮೊದಲಾದ ವಿದ್ಯುನ್ಮಾನ ಮಾದ್ಯಮಗಳಲ್ಲಿ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿಯೂ ಅವು ಪ್ರಕಟ ಪ್ರಸಾರಗೊಂಡಿವೆ. ಹಾಗೂ ೨೦೦೨ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ `ಲಾಟರಿ' ಕತೆ ಬಹುಮಾನ ಪಡೆದು ಪ್ರಕಟಗೊಂಡಿದೆ. .ಮತ್ತು ೨೦೧೦ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ೬ನೇ ಅಕ್ಕ ವಿಶ್ವ ಕನ್ನಡ ಕಥಾ ಸ್ಪರ್ಧೆಯಲ್ಲಿ ಇವರ 'ಡಾಂಬಾರು ದಂಧೆ' ಕತೆ ಬಹುಮಾನ ಪಡೆದು 'ದೀಪಾತೊರಿದೆಡೆಗೆ' ಎಂಬ ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ. ೨೦೧೨ರಲ್ಲಿ ಬೆಳಗಾವಿಯಲ್ಲಿ ನಡೆದ ೪ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಇವರ `ಮೊದಲ ಗಿರಾಕಿ' ಕಥಾ ಸಂಕಲನಕ್ಕೆ ಉತ್ತಮ ಕಥಾ ಪುಸ್ತಕ ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಮಠದ ವತಿಯಿಂದ ೨೦೦೭ರಿಂದ ಪ್ರತಿವರ್ಷ ಕೊಡಲ್ಪಡುತ್ತಿರುವ ರಾಜ್ಯ ಮಟ್ಟದ ಮೊದಲ ಉರಿಲಿಂಗ ಪೆದ್ದಿ ಪ್ರಶಸ್ತಿ ಪಡೆದಿದ್ದಾರೆ. ಮತ್ತು ೨೦೦೩ರಲ್ಲಿ ಬಸವಕಲ್ಯಾಣ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ೨೦೨೦ರ ಸೆಪ್ಟೆಂಬರ ತಿಂಗಳಲ್ಲಿ ಬುಕ್ ಬ್ರಹ್ಮ ಅಂತರಜಾಲ ತಾಣವು ಏರ್ಪಡಿಸಿದ ರಾಜ್ಯ ಮಟ್ಟದ ಜನ ಮೆಚ್ಚಿದ ಪ್ರಬಂಧ ಸ್ಪರ್ಧೆಯಲ್ಲಿ ಇವರ `ಗೌರ್ಮೆಂಟ್ ಸರ್ವೇಂಟನ ಹೆಂಡ್ತಿ’ ಎಂಬ ಪ್ರಬಂಧಕ್ಕೆ ದ್ವಿತೀಯ ಬಹುಮಾನ ಪ್ರಶಸ್ತಿ ಪತ್ರ ಲಭೀಸಿದೆ. ಹೀಗೆ ಹಲವಾರು ರಾಜ್ಯ ಮಟ್ಟದ ಕತೆ ಕವನ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ