ಭಾನುವಾರ, ಜನವರಿ 12, 2025
ಸುಭಾಸ ನೇಳಗೆ
ವಿಜ್ಞಾನ ಬರಹಗಾರ ಸುಭಾಸ ನೇಳಗೆಯವರು ಬೀದರದ ಶ್ರೀ ನಾಗನಾಥ ಮತ್ತು ರುಕ್ಮಿಣಿ ದಂಪತಿಗಳಿಗೆ ದಿನಾಂಕ ೧೭-೪-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ, (ಸಸ್ಯ ಶಾಸ್ತ್ರ) ಎಂ.ಫೀಲ್. (ಜೀವ ಶಾಸ್ತ್ರ) ಪದವಿಧರರಾದ ಇವರು ೧೯೯೪ರಿಂದ ಬೀದರದ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಸುಮಾರು ೧೦ ವರ್ಷಗಳಿಂದ ಭಾಲ್ಕಿಯ ಕರಡ್ಯಾಳದ ಸಿ.ಬಿ.ಗುರುಕುಲ ವಿಜ್ಞಾನ, ಪಿ.ಯು.ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾದ ಇವರು ೧೯೯೯ರಲ್ಲಿ `ಸಸ್ಯ ಪ್ರಪಂಚದ ಅಧ್ಬುತಗಳು’ ೨೦೦೦ ಇಸ್ವಿಯಲ್ಲಿ `ವಿಚಿತ್ರ ಸಂಗತಿಗಳು’ ೨೦೦೬ರಲ್ಲಿ `ಅಲ್ ಫ್ರೆಡ್ ನೊಬೆಲ್ ಮತ್ತು ಪುರಸ್ಕಾರ’ ೨೦೦೯ರಲ್ಲಿ `ಬೆಳಕು ಚೆಲ್ಲುವ ಜೀವಿಗಳು’ ೨೦೧೫ರಲ್ಲಿ `ಪರಿಸರ ಸಮಸ್ಯೆಗಳು' ಎಂಬ ವೈಜ್ಞಾನಿಕವಾದ ಕುತೂಹಲ ಕೆರಳಿಸುವ ಕೃತಿಗಳು ಪ್ರಕಟಿಸಿದ್ದರೆ. ೧೯೯೬ರಲ್ಲಿ `ಎರಡು ಬಳ್ಳಿ ಹೂ ಹಲವು' ೧೯೯೮ರಲ್ಲಿ `ವಿಜ್ಞಾನ ಸಾಹಿತ್ಯ' ೧೯೯೯ರಲ್ಲಿ `ಧರಿನಾಡ ಸಿರಿ' ೨೦೦೬ರಲ್ಲಿ `ಬಸವಪ್ರಭೆ' ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೂ ೨೦೦೮ರಲ್ಲಿ `ಪ್ರಾಯೋಗಿಕ ವಿಜ್ಞಾನ ಪ್ರಾಜೆಕ್ಟ್ ಗಳು' ಎಂಬ ಕೃತಿಯು ಇಂಗ್ಲೀಷ್ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ದಿಕ್ಸೂಚಿ ಮತ್ತು ವಾಸನ್ ಜಿಕೆ ಮಾಸಿಕಗಳಲ್ಲಿ `ವಿಜ್ಞಾನವಲೋಕನ’, `ವಿಜ್ಞಾನ ತಿರುಳು' ಎಂಬ ಅಂಕಣಗಳು ಪ್ರಕಟವಾಗಿವೆ. ಇವರ ಬರಹಗಳಿಗೆ ರಾಜ್ಯಮಟ್ಟದ ಪತ್ರಿಕೆ ಹಾಗೂ ಸಂಘ ಸಂಸ್ಥೆಯವರು ಏರ್ಪಡಿಸಿದ ವಿಜ್ಞಾನ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಪ್ರಶಸ್ತಿ ಪುರಸ್ಕಾರಗಳು ಪಡೆದ ಇವರು ೧೯೯೧ರಲ್ಲಿ ಬೀದರ ಬಾಂಬ್ ಸ್ಪೋಟದಲ್ಲಿ ಸಿಲುಕಿ ತೀವ್ರವಾದ ಗಾಯಗೊಂಡು ಮೂರು ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಾಕಷ್ಟು ನೋವುಗಳನ್ನು ಎದುರಿಸುವ ಸಂದರ್ಭದಲ್ಲಿ ಒಡಹುಟ್ಟಿದ ತಮ್ಮನಿಗೆ ಕಿಡ್ನಿ ವೈಫಲ್ಯವಾದಾಗ ಧರ್ಯ ಮಾಡಿ ಒಂದು ಕಿಡ್ನಿ ದಾನ ಮಾಡಿದ ತ್ಯಾಗ ಜೀವಿಗಳಿವರು. ಆದರೂ ದೇವರು ದೊಡ್ಡವನು ಅಣ್ಣ ತಮ್ಮ ಇಬ್ಬರೂ ಆರೋಗ್ಯವಾಗಿರುವುದರಿಂದ ಈಗ ಇವರು ನೆಮ್ಮದಿಯಿಂದ ಸಾಹಿತ್ಯ ರಚನೆ ಮುಂದುವರೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ