ಶನಿವಾರ, ಜನವರಿ 11, 2025
ಡಾ.ಪ್ರೇಮಾ ಸಿರ್ಸೆ
ಹಿರಿಯ ಸಾಹಿತಿ ಡಾ.ಪ್ರೇಮಾ ಸಿರ್ಸೆ. ಇವರು ಬೀದರ ಜಿಲ್ಲೆ ಭಾಲ್ಕಿಯ ಶ್ರೀ ಮಹಾರುದ್ರಪ್ಪ ಮತ್ತು ಶ್ರೀಮತಿ ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ ೧೫-೯-೧೯೫೩ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವೀಧರರಾದ ಇವರು ೧೯೭೫ರಿಂದ ೧೯೭೮ರವರೆಗೆ ಭಾಲ್ಕಿ ಶ್ರೀ ಚನ್ನಬಸವೇಶ್ವರ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ನಂತರ ೧೯೭೮ರಿಂದ ಬೀದರ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೧೯೮೦ರಲ್ಲಿ `ಇದು ಒಂದು ಮಹಾಭಾರತ' ಎಂಬ ಕವನ ಸಂಕಲನ, ೧೯೮೬ರಲ್ಲಿ `ನೂರೊಂದು ನೆನಪು ಎದೆಯಾಳದಲ್ಲಿ’ ಎಂಬ ಮುಕ್ತಕಗಳು, ೧೯೯೦ರಲ್ಲಿ `ಚುಕ್ಕೆಗಳು' ಎಂಬ ಹನಿಗವನ ಸಂಕಲನ, ೨೦೦೪ರಲ್ಲಿ `ಹೊಸ ಬದುಕು' ಎಂಬ ಗದ್ಯ ೨೦೦೬ರಲ್ಲಿ `ಮಹಿಳೆ -ಸಮಾಜ ಮತ್ತು ಸವಾಲುಗಳು' ೨೦೦೯ರಲ್ಲಿ `ಸಾಹಿತ್ಯ ಸಿಂಚನ' ಮತ್ತು `ಸಾಹಿತ್ಯಾವಲೋಕನ' ಎಂಬ ಲೇಖನಗಳ ಸಂಕಲನಗಳು, ೨೦೦೫ರಲ್ಲಿ ಡಾ.ಸೋಮನಾಥ ಯಾಳವಾರ ಅವರೊಂದಿಗೆ `ಬೀದರ ಜಿಲ್ಲಾ ದರ್ಶನ' ಎಂಬ ಕೃತಿಯು ಸಂಪಾದಿಸಿದ್ದಾರೆ. ಇವರ ಬರಹಗಳು ಲಂಕೇಶ್, ಸಂಕ್ರಮಣ, ಶೂದ್ರ ಅನ್ವೇಷಣೆ, ತರಂಗ, ಮಲ್ಲಿಗೆ, ಆಕಾಶವಾಣಿ ಮೊದಲಾದವುಗಳಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರಿಗೆ ಕಸಾಪದ `ರತ್ನಾಕರ ವರ್ಣಿ ಮುದ್ದಣ ಅನಾಮಿಕ ಪ್ರಶಸ್ತಿಯು ಲಭಿಸಿದೆ. ಇವರ `ಇದು ಒಂದು ಮಹಾಭಾರತ' ಕೃತಿಯು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಬಿ.ಕಾಂ.ವಿದ್ಯಾರ್ಥಿಗಳಿಗೆ ದ್ವಿತೀಯ ಸೆಮಿಸ್ಟರ್ ಪಠ್ಯ ಪುಸ್ತಕವಾಗಿದೆ. ಸದ್ಯ ಇವರು ಬೀದರದ ನೌಬಾದನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ