ಶುಕ್ರವಾರ, ಜನವರಿ 10, 2025
ಬಿ.ಎಸ್.ಖೂಬಾ
`ಸರಸ್ವತಿ ತನಯ ಜಿಮ್ಮ’ ಎಂಬ ಕಾವ್ಯನಾಮ ಹೊಂದಿದ ಬಿ.ಎಸ್.ಖೂಬಾ ರವರ ಪೂರ್ಣ ಹೆಸರು ಬಂಡೆಪ್ಪಾ ಶರಣಪ್ಪಾ ಖೂಬಾ ಎಂದಾಗಿದೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೋಳಾದ ಶರಣಪ್ಪಾ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೮-೭-೧೯೩೮ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಹಿಂದಿ, ಸ್ನಾತಕೊತ್ತರ ಪದವಿಧರರಾದ ಇವರು ವಿವಾಹದ ನಂತರ ತಮ್ಮ ಪತ್ನಿಯ ಹುಟ್ಟೂರಾದ ಹುಮನಾಬಾದ ತಾಲೂಕಿನ ಗಡವಂತಿಯಲ್ಲಿ ನೆಲೆ ನಿಂತು. ೧೯೫೯ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ, ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೧೯೯೬ರಲ್ಲಿ ನಿವೃತ್ತರಾಗಿದ್ದಾರೆ. ಇವರು ೧೯೯೫ರಲ್ಲಿ `ಅಳು ನಗೆಯ ಸುಳಿಯಲ್ಲಿ ಪೆದ್ದ ಜಿಮ್ಮ’ (ಖಂಡಕಾವ್ಯ,) `ಐವತ್ತೆಂಟರಲ್ಲಿ ಅನುತ್ತರನ ಪೌರುಷ’ (ಕವನ ಸಂಕಲನ) ೧೯೯೭ರಲ್ಲಿ `ಬಿಂಬ ಪ್ರತಿಬಿಂಬ’ (ಕಥಾ ಸಂಕಲನ) ೧೯೯೮ರಲ್ಲಿ `ಯುಗವಾಣಿ’ (ಪ್ರಬಂಧ ಕಾವ್ಯ) ೨೦೦೧ರಲ್ಲಿ `ಶತಕಾಂತ್ಯದ ವಚನ ಶತಕ’ (ಆಧುನಿಕ ವಚನ) ೨೦೦೨ರಲ್ಲಿ `ಧರಿನಾಡಿನ ಗಂಡುಗಲಿ ರಾಮ’ (ಚರಿತ್ರೆ) ೨೦೦೯ರಲ್ಲಿ `ವಿಚಾರ-ವೀಚಿ’ ೨೦೧೨ರಲ್ಲಿ `ದಿವ್ಯ ರಶ್ಮಿ’ (ಚಿಂತನ) ೨೦೧೦ರಲ್ಲಿ `ರಹಸ್ಯ ರಂಜನೆ’ (ಪ್ರಬಂಧ) ೨೦೧೧ರಲ್ಲಿ `ಸಹಯೋಗ ಸ್ನೇಹಿ ಎಂ.ಆರ್.ಗಾದಾ’ (ಚರಿತ್ರೆ) ೨೦೧೩ರಲ್ಲಿ `ಸ್ವಗತದೊಂದಿಗೆ ಹುಲಿಯ ಸಿದ್ದೇಶ್ವರ ಮತ್ತು ಮುಗ್ಧ ಸಂಗಯ್ಯ’ (ಸ್ವಗತ ಚರಿತ್ರೆ) ಮುಂತಾದ ಕೃತಿಗಳು ಬರೆದಿದ್ದಾರೆ. ಮತ್ತು ೧೯೯೬ರಲ್ಲಿ `ಪುರಸ್ಕಾರ’ ೨೦೦೪ರಲ್ಲಿ `ವಿಶ್ವ ವಿಖ್ಯಾತ ಬಿದ್ರಿಕಲಾ’ ೨೦೦೮ರಲ್ಲಿ `ವಚನ ಪ್ರಭಾ’ ಮತ್ತು ೨೦೦೮ರಲ್ಲಿ `ಕಥಾ ಭಾರತಿ’, `ಯಜ್ಞ ಸೇನಿಯ ಆತ್ಮಕಥನ’, `ಕನ್ನಡ-ಹಿಂದಿ ಕಾವ್ಯಧಾರೆ’ ಎಂಬ ಕೃತಿಗಳು ಹಿಂದಿಗೆ ಅನುವಾದಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯು ಪ್ರಕಟ, ಪ್ರಸಾರವಾಗಿವೆ. ೧೯೯೪ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ. ರಾಜ್ಯೋತ್ಸವ ಪ್ರಶಸ್ತಿ, ಸುರಭಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿಯು ಪಡೆದಿದ್ದಾರೆ. ೧೯೭೦ರಿಂದ ೧೯೭೩ ರವರೆಗೆ ಹುಮನಾಬಾದ ಕಸಾಪ ಅಧ್ಯಕ್ಷರಾಗಿ, ೧೯೭೮ರಿಂದ ೧೯೮೨ರವರೆಗೆ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ೧೯೯೭ರಲ್ಲಿ ಹುಮನಾಬಾದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ