ಪುಟಗಳು

ಶುಕ್ರವಾರ, ಜನವರಿ 10, 2025

ದೇಶಾಂಶ ಹುಡಗಿ

`ದೇಶಾಂಶ ಹುಡಗಿ' ಎಂಬ ಕಾವ್ಯನಾಮದಿಂದ ಖ್ಯಾತರಾದ ಹಿರಿಯ ಸಾಹಿತಿ ಶಾಂತಪ್ಪಾ ದೇವರಾಯ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಶರಣಪ್ಪ ಮತ್ತು ಭೀಮಬಾಯಿ ದಂಪತಿಗಳಿಗೆ ದಿನಾಂಕ ೬-೧೧-೧೯೩೬ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಎಡ್, ಪದವಿಧರರಾದ ಇವರು ಹಿಂದಿ ಸಾಹಿತ್ಯ ವಿಶಾರದ, ಸಂಸ್ಕೃತ ಪ್ರಾರಂಭಿಣಿ ಕೋರ್ಸುಗಳನ್ನು ಅಧ್ಯಯನ ಮಾಡಿ, ೭ನೇ ತರಗತಿಯವರೆಗೆ ಉರ್ದು, ಮರಾಠಿ ಭಾಷೆಗಳು ದ್ವಿತೀಯ ತೃತೀಯ ಭಾಷೆಯಾಗಿ ಅಧ್ಯಯನ ಮಾಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದ ಇವರು ಶಾಲಾ ತನಿಖಾಧಿಕಾರಿಯಾಗಿ ಸೇವೆ ಸಲ್ಲಿಸಿ ೧೯೯೪ ದಲ್ಲಿ ನಿವೃತ್ತರಾಗಿದ್ದರು. ಇವರು ೧೯೮೦ರಲ್ಲಿ `ಗ್ರಾಮಶಿಲ್ಪಿಗಳು' (ವ್ಯಕ್ತಿ ಚಿತ್ರಗಳು) `ಬದುಕಿನ ಸುತ್ತ' `ಜ್ಯೋತಿ ಬೆಳಗುತ್ತಿದೆ' (ಕವನ ಸಂಕಲನಗಳು) `ಮಾಸ್ತರನ ಮನೆ' (ಕಥಾಸಂಕಲನ) `ಪುಸ್ತಕಗಳ ಸುತ್ತಮುತ್ತ' (ಲಲಿತ ಪ್ರಬಂಧ) `ಇವಳು' (ಚುಟುಕು ಸಂಕಲನ) `ಸತ್ಯವು ಗಲ್ಲಿಗೆರಿತ್ತು’ (ರುಬಾಯಿ) `ಹನಿ ಹನಿ ಹನಿ ಹನಿ' (ಹನಿಗವನ) `ಚನ್ನಬಸವ ಚರಿತೆ' (ಮಹಾಕಾವ್ಯ) `ಬೀದರ ಕನ್ನಡ ಶಬ್ದ ಕೋಶ' (ಶಬ್ದಕೋಶ) `ದಿಗಂಬರ ಕಾವ್ಯ', `ಬೀದರ ಜಿಲ್ಲೆಯಲ್ಲಿ ಕನ್ನಡ ಕಟ್ಟಿದವರ ಕಥನ ಗೀತೆಗಳು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಅಕ್ಷರ ಜ್ಯೋತಿ' ಮತ್ತು `ಬೀದರ ದೀಪ' ಎಂಬ ಸಾಕ್ಷರತೆಯ ಕೃತಿಗಳು ಭಾಗ ೧.೨.೩.ರಲ್ಲಿ ಕನ್ನಡ, ಮರಾಠಿ, ಉರ್ದು ಭಾಷೆಯಲ್ಲಿ ಸಂಪಾದಿಸಿದ್ದಾರೆ. `ನಾ ಕಂಡ ನನ್ನವರು' `ಬೀದರ ಜಿಲ್ಲೆಯ ಬರಹಗಾರರು', `ಬೀದರ ಜಿಲ್ಲೆಯ ತತ್ವ ಪದಕಾರರು,' `ವ್ಯಕ್ತಿ ಸಂಗ್ರಾಮದ ಮೌಕ್ತಿಕಗಳು', `ಧರಿನಾಡಿನ ಒಗಟುಗಳು', `ಜಾನಪದ ಸೊಗಡು' ಸೇರಿದಂತೆ ಸುಮಾರು ೪೫ಕಿಂತ ಹೆಚ್ಚು ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರಿಗೆ ಬಿ.ಎಸ್.ಗದಗಿಮಠ ಜಾನಪದ ತಜ್ಞ ಪ್ರಶಸ್ತಿ, ಮತ್ತು ಕೆ.ಜಿ.ಕುಂದಣಗಾರ ಗಡಿ ಕನ್ನಡ ಸಾಹಿತ್ಯ ಪ್ರಶಸ್ತಿ, ಸಾಕ್ಷರತಾ ಸಮಿತಿಯಿಂದ `ಸಮಾಜಮುಖಿ' ಪ್ರಶಸ್ತಿ, ಭಾಲ್ಕಿ ಮಠದಿಂದ `ಡಾ.ಚನ್ನಬಸವ ಪಟ್ಟದ್ದೆವರು ಪ್ರಶಸ್ತಿ, ಹಾರಕೂಡ ಮಠದಿಂದ ಶ್ರೀಚನ್ನ ರತ್ನ ಪ್ರಶಸ್ತಿ, ಜಾನಪದ ಕಾರಂಜಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ೨೦೦೮ರಲ್ಲಿ ಬೀದರ ಜಿಲ್ಲಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ೧೯೯೮ರಲ್ಲಿ ಧರಿನಾಡು ಕನ್ನಡ ಸಾಹಿತ್ಯ ಸಂಘವನ್ನು ಹುಟ್ಟುಹಾಕಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಬೀದರ ಜಿಲ್ಲೆಯಾದ್ಯಂತ ಸಾಕಷ್ಟು ಸಾಹಿತ್ಯ ಚಟುವಟಿಕೆಗಳನ್ನು ಮಾಡಿದ್ದಾರೆ. ಇವರು ೨೦೨೦ರ ನವೆಂಬರ ೨೫ರಂದು ಇಹಲೋಕ ತ್ಯೆಜಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ