ಪುಟಗಳು

ಮಂಗಳವಾರ, ಜನವರಿ 14, 2025

ಶ್ರೀದೇವಿ ಬಿ.ಹಿರೇಮಠ

ಅಧ್ಯಾತ್ಮಿಕ ದೃಷ್ಟಿಕೋನದಿಂದ ತತ್ವಪದ ಜಾನಪದ ಹಾಡುಗಳು ರಚಿಸಿ ಕವಯತ್ರಿಯರಾಗಿ ಗುರುತಿಸಿಕೊಂಡಿರುವ ಶ್ರೀದೇವಿ ಬಿ.ಹಿರೇಮಠ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಆಳಂದಿ ಗ್ರಾಮದ ಸಿದ್ದಯ್ಯಾ ಸ್ವಾಮಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೨೭-೧-೧೯೬೬ರಲ್ಲಿ ಜನಿಸಿದ್ದಾರೆ. ಇವರು ಹಾರಕೂಡ ಶ್ರೀಗಳ ಸಹೋದರರಾದ ಶ್ರೀ ಬಸವರಾಜ ತಂದೆ ಕರಿಬಸಯ್ಯನವರ ಧರ್ಮ ಪತ್ನಿಯಾದ ಇವರು ಓದಿದ್ದು ಬರಿ ಏಳನೇ ತರಗತಿಯವರೆಗೆ ಮಾತ್ರ. ಅದು ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಕನ್ನಡ ಕಲಿತದ್ದು ತಮ್ಮ ಮೈದುನ ಮಲ್ಲಿನಾಥ ಹಿರೇಮಠ ಅವರಿಂದ. ಕನ್ನಡ ಲಿಪಿ, ಅಕ್ಷರ ಕಲಿತು ಕನ್ನಡ ಭಾಷೆಯು ಸರಳ ಹಾಗೂ ಸಲಿಲವಾಗಿ ಮಾತನಾಡುವುದು ಕಲಿತು, ಕನ್ನಡ ಸಾಹಿತ್ಯ ರಚಿಸುವಷ್ಟು ಪ್ರಬುದ್ಧತೆ ಹೊಂದಿರುವುದು ನೋಡಿದರೆ ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ. ಇವರು ಬಾಲ್ಯದಲ್ಲಿ ತಮ್ಮ ದೊಡ್ಡಪ್ಪನವರ ಮನೆಯಲ್ಲಿ ಪ್ರತಿ ಸೋಮವಾರ ಭಜನೆ ಮಾಡುವುದು, ಹಾರಕೂಡ ಶ್ರೀಗಳ ಕುರಿತು ಹಾಡು ಹಾಡುವುದು. ಶರಣ - ಶರಣೆಯರ ವಚನಗಳನ್ನು ಕಂಠಪಾಠ ಮಾಡಿ ಹಾಡುವುದನ್ನು ರೂಢಿಸಿಕೊಂಡು ಸಂಗೀತದಲ್ಲಿಯು ತುಂಬ ಆಸಕ್ತಿ ಬೆಳೆಸಿಕೊಂಡು ಬೆಳೆದವರು. ಮುಂದೆ ಇವರು ಹಾರಕೂಡ ಶ್ರೀಗಳ ಕುಟುಂಬದಲ್ಲಿ ನಾಲ್ಕು ಜನ ಭಾವ-ಮೈದುನ ನಾದಿನಿಯರು ಹಾಗೂ ಮಾವ ವೇ.ಮೂ. ಕರಿಬಸವಯ್ಯ ಅತ್ತೆ ಸುಭದ್ರಾಬಾಯಿಯವರೊಂದಿಗೆ ತುಂಬ ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವುದರೊಂದಿಗೆ ಕನ್ನಡದಲ್ಲಿ ಕವನಗಳು, ಆಧುನಿಕ ವಚನಗಳು, ಬರೆದಿದ್ದಾರೆ. ಅವು ಎಂ.ಎಸ್.ಲಠ್ಠೆ ಸಂಪಾದಿಸಿರುವ `ಕಲ್ಯಾಣನಾಡಿನ ಪರಂ ಜ್ಯೋತಿ’ ಎಂಬ ಪುಸ್ತಕದಲ್ಲಿ ಇವರು ಬರೆದ ಹತ್ತಾರು ಹಾಡುಗಳು ಪ್ರಕಟವಾಗಿವೆ. ಮತ್ತು ಕಲಬುರಗಿ ಆಕಾಶವಾಣಿಯಿಂದಲೂ ಇವರ ಕವನಗಳು ಪ್ರಸಾರವಾಗಿವೆ. ಗದಲೇಗಾಂವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಾಹಿತ್ಯ ಸಮ್ಮೇಳನದಲ್ಲಿ ಇವರು ಕವನ ವಾಚನವು ಮಾಡಿದ್ದಾರೆ. ಇವರಿಗೆ ೨೦೧೦ರಲ್ಲಿ ಕಲಬುರ್ಗಿಯ ಜಯನಗರ ಅನುಭವ ಮಂಟಪದಲ್ಲಿ ಜರುಗಿದ ಅಕ್ಕಗಳ ಸಮ್ಮೇಳನದಲ್ಲಿ ಪಾಲ್ಗೊಂಡು ವಚನ ಸ್ಪರ್ಧೆ, ವಚನ ರೂಪಕದಲ್ಲಿ ಆಯ್ದಕ್ಕಿ ಲಕ್ಕಮ್ಮನ ಪಾತ್ರ ಮಾಡಿದ್ದರಿಂದ ಅಂದಿನ ಮಂತ್ರಿಗಳಾದ ಶ್ರೀಮತಿ ಲೀಲಾವತಿ ಆರ್ ಪ್ರಸಾದ, ಅರವಿಂದ ಜತ್ತಿ, ವಿಲಾಸವತಿ ಖೂಭಾ ಅವರ ಸಮ್ಮುಖದಲ್ಲಿ ವಿಶೇಷ ಪುರಸ್ಕಾರವು ಲಭಿಸಿದೆ. ಕಲಬುರ್ಗಿಯ ಆಕಾಶವಾಣಿಯವರು ಏರ್ಪಡಿಸಿದ ನಾಗರ ಪಂಚಮಿ ಹಬ್ಬದ ಕಾರ್ಯಕ್ರಮದಲ್ಲಿಯು ಪಾಲ್ಗೊಂಡು ಕಾರ್ಯಕ್ರಮ ನೀಡಿ ಹಲವಾರು ಸಂಪ್ರದಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇಯಲ್ಲದೆ ಚನ್ನಬಸವ ಶಿವಯೋಗಿಗಳ ಕುರಿತು ಹಾಡುಗಳು ಮತ್ತು ವಚನಗಳು ಬರೆದಿದ್ದರಿಂದ ಮುಂಬರುವ ದಿನಗಳಲ್ಲಿ ಅವು ಪ್ರಕಟಿಸುವ ಹಂತದಲ್ಲಿದ್ದಾರೆ. ಇವರು ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹಾರಕೂಡ ಚನ್ನಬಸವೇಶ್ವರ ಶಿಕ್ಷಣ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಇವರಿಗೆ ಹಾರಕೂಡ ಶ್ರೀಗಳು ದಸರಾ ಮಹೋತ್ಸವದ ಮಹಾನವಮಿಯ ಬ್ರಹತ್ ಸಭೆಯಲ್ಲಿ ಇವರ ಯಜಮಾನರಾದ ಬಿ.ಕೆ.ಹಿರೇಮಠ ದಂಪತಿಸಹಿತ ಸತ್ಕರಿಸಿ ಆರ್ಶಿವದಿಸಿದ್ದಾರೆ. ಅಷ್ಟೇಯಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ