ಪುಟಗಳು

ಶನಿವಾರ, ಜನವರಿ 11, 2025

ಡಾ. ಬಸವರಾಜ ಬಲ್ಲೂರ

ಸಾಹಿತಿ ಡಾ.ಬಸವರಾಜ ಬಲ್ಲೂರ್. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಬಲ್ಲೂರ ಗ್ರಾಮದ ಮಲ್ಲಶೆಟ್ಟಿ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೫-೧೧-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ ಮತ್ತು ವಚನಾ ಡಿಪ್ಲೊಮಾ ಪದವಿ ಪಡೆದು ಕೆಲ ವರ್ಷ ಪದವಿ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸದ್ಯ ೨೦೦೫ರಿಂದ ಬೀದರದ ಕರ್ನಾಟಕ ಪದವಿ ಮಹಾವಿದ್ಯಾಲಯದಲ್ಲಿ ಖಾಯಂ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, `ಶ್ರೀ ಗುರುಬಸವ ಪಟ್ಟದ್ದೆವರು' ಎಂಬುದು ಭಾಲ್ಕಿ ಶ್ರೀಗಳ ಜೀವನ ಚರಿತ್ರೆಯಾದರೆ, `ಅಕ್ಷರ ಕಲ್ಯಾಣ' ಇದು ಭಾಲ್ಕಿ ಮಠದ ಪರಿಚಯಾತ್ಮಕ ಕೃತಿಯಾಗಿದೆ. `ಅನುಭವ ಮಂಟಪದ ಚಾರಿತ್ರಿಕ ನೆಲೆಗಳು' ಎನ್ನುವುದು ಅವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ವೀರೆಂದ್ರ ಸಿಂಪಿ ಸಮಗ್ರ ಸಾಹಿತ್ಯ ಸಂಪುಟ', `ವೀರೆಂದ್ರ ಸಿಂಪಿಯವರ ಸಮಗ್ರ ಲಲಿತ ಪ್ರಬಂಧಗಳು', `ದಾಂಪತ್ಯ ಗೀತೆ', `ಸಮರಸ ದಾಂಪತ್ಯ', `ಪುಲಿಚೆರು ಸಂಸ್ಕೃತಿ', `ಸಮಷ್ಟಿ', `ಯುಗದ ಉಲ್ಲಾಸ', `ಭಾಹತ್ತರ' ಮೊದಲಾದ ಹದಿನೇಳು ಕೃತಿಗಳು ಸಂಪಾದಿಸಿದ್ದಾರೆ. ಮತ್ತು ೫೦ಕಿಂತ ಹೆಚ್ಚು ಲೇಖನಗಳು ಬರೆದಿದ್ದು ಅವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ೪ ಪ್ರಕಟಣೆಯ ಸಂಚಾಲಕರಾಗಿ, ಬಸವಕಲ್ಯಾಣ ಕಸಾಪದ ಕಾರ್ಯದರ್ಶಿಯಾಗಿ, ಭಾಲ್ಕಿ ಶಾಂತಿ ಕಿರಣ ಪತ್ರಿಕೆಯ ಸಂಪಾದಕರಾಗಿ, ಎರಡು ಅವಧಿಗೆ ಬೀದರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಇವರಿಗೆ ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪ್ರಶಸ್ತಿ, ಭಾಲ್ಕಿ ಮಠದಿಂದ `ಉತ್ತಮ ಓದುಗ ಪ್ರಶಸ್ತಿ’ಗಳು ಲಭಿಸಿವೆ. ಮತ್ತು ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತಿನಿಂದ ಔರಾದ ತಾಲೂಕಿನ ಖೇಡ ಸಂಗಮದಲ್ಲಿ ನಡೆದ ಪ್ರಥಮ ಶರಣಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ