ಪುಟಗಳು

ಮಂಗಳವಾರ, ಜನವರಿ 14, 2025

ಗೋಪಾಲಕೃಷ್ಣ ವಂಡ್ಸೆ

ಹಿರಿಯ ಸಾಹಿತಿ ಗೋಪಾಲಕೃಷ್ಣ ವಂಡ್ಸೆಯವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮದ ನಾಗಪ್ಪ ಹೊಳ್ಳ ಮತ್ತು ಮೂಕಾಂಬಿಕಾ ದಂಪತಿಗಳಿಗೆ ದಿನಾಂಕ ೩೧-೧೦-೧೯೬೫ರಲ್ಲಿ ತಮ್ಮ ತಾಯಿ ತವರೂರಾದ `ವಂಡ್ಸೆ' ಗ್ರಾಮದಲ್ಲಿ ಜನಿಸಿದ್ದಾರೆ. ಇವರು ಪದವಿವರೆಗೆ ಮಾತ್ರ ಅಧ್ಯಯನ ಮಾಡಿ ಕೆಲ ವರ್ಷ ಫೋಟೋಗ್ರಾಫರಾಗಿ ಸೇವೆ ಸಲ್ಲಿಸಿ ನಂತರ ಹೋಟೆಲ್ ಉದ್ಯಮಿಯಾಗಿ ಬೀದರನಲ್ಲಿ ನೆಲೆಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ೧೯೮೭ರಲ್ಲಿ `ಬಣ್ಣದ ಚಿಟ್ಟೆ' ೧೯೮೮ರಲ್ಲಿ `ನಮ್ಮ ಚಂದಿರ' ೧೯೮೯ರಲ್ಲಿ `ಕಂದನ ಕನಸು' ೧೯೯೦ರಲ್ಲಿ `ತರ ತರ ಹೂಗಳು' (ಮಕ್ಕಳ ಕವನ ಸಂಕಲನಗಳು) ೧೯೯೭ರಲ್ಲಿ `ನಕ್ಷತ್ರ ಕಡ್ಡಿ' (ಹನಿಗವನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ಸುಧಾ, ಮಯೂರ, ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ, ಉದಯವಾಣಿ, ತರಂಗ, ತುಷಾರ, ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ೨೦೧೬ರಲ್ಲಿ ಬೀದರಿನ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ರಾಜ್ಯ ಮಟ್ಟದ ಕಾವ್ಯ ಚೂಡಾಮಣಿ ರತ್ನ ಪ್ರಶಸ್ತಿ, ೨೦೨೦ರಲ್ಲಿ ಬೀದರನಲ್ಲಿ ನಡೆದ ಅಖಿಲ ಭಾರತ ದ್ವಿತೀಯ ಕವಿ ಕಾವ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರಿನ ವತಿಯಿಂದ ಸಿಂಪಿ ಲಿಂಗಣ್ಣ ಪ್ರಶಸ್ತಿ, ಮೊದಲಾದವು ಪಡೆದಿದ್ದಾರೆ. ಲೇಖಕರು ತರುಣರಾಗಿದ್ದಾಗ ಉತ್ತಮ ಫೋಟೋಗ್ರಾಫರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅಷ್ಟೇಯಲ್ಲದೆ ಕೆಲ ಬಡ ದಲಿತ ಯುವಕರಿಗೆ ಪೋಟೋಗ್ರಾಫಿ ಕಲೆಯನ್ನು ಕರಗತ ಮಾಡಿಸಿ, ಅವರಿಗೆ ಸಾಹಿತ್ಯಿಕವಾಗಿಯು ಹುರಿದುಂಬಿಸಿ, ಲೇಖಕ ಪತ್ರಕರ್ತರಾಗಿ ಬೆಳಯಲು ಕಾರಣಿ ಭೂತರಾಗಿದ್ದು, ನೋಡಿದರೆ ಇವರಲ್ಲಿ ದಲಿತಪರ ಕಾಳಜಿ ಇರುವುದು ಎದ್ದು ತೋರುತ್ತದೆ. ೩೫ ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡ ಇವರು ಸದ್ಯ ೨೩ ವರ್ಷಗಳಿಂದ ಬೀದರದ ನಿವಾಸಿಯಾಗಿ, ಖಾಸಗಿ ಉದ್ಯಮದೊಂದಿಗೆ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ