ಪುಟಗಳು

ಮಂಗಳವಾರ, ಜನವರಿ 14, 2025

ಮಹಮದ್ ಜಾನಿಮಿಯಾ

ನಾಟಕಕಾರ, ಮಹಮ್ಮದ್ ಜಾನಿಮಿಯಾ ರವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರಾ (ಆರ್) ಗ್ರಾಮದ ವಜಿರಸಾಹೇಬ್ ಮವಜನ್ ಮತ್ತು ಸಜನ್‌ಬೀ ದಂಪತಿಗಳಿಗೆ ದಿನಾಂಕ ೧-೧-೧೯೫೧ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಹವ್ಯಾಸಿ ಚಿತ್ರ ಕಲಾವಿದರಾಗಿ ಸಾಹಿತಿ, ಲೇಖಕ, ನಾಟಕಕಾರರಾಗಿ ಗುರ್ತಿಸಿಕೊಂಡು ವೃತ್ತಿ ಕಲಾವಿದರಾಗಿ ಬದುಕು ಕಟ್ಟಿಕೊಂಡವರು. ಚಿತ್ರ ಕಲೆಯನ್ನು ಹವ್ಯಾಸಿಯಾಗಿ ಕಲಿತುಕೊಂಡು ಉತ್ತಮ ತೈಲ ವರ್ಣ, ಲೈಪ್ ಪೆಟಿಂಗ್ ಮತ್ತು ಪೊಟ್ರೇಟ್ ಚಿತ್ರ ಬಿಡಿಸಿ ಉಪಜೀವನ ನಡೆಸುತ್ತಾರೆ. ಇವರು ಬಿಡಿಸಿದ ಚಿತ್ರಗಳು ಲಾಲಧರಿ ಮಠ ಸೇರಿದಂತೆ ಮೊದಲಾದ ಊರುಗಳ ದೇವಸ್ಥಾನಗಳಲ್ಲಿ ಇಂದಿಗೂ ತೈಲ ವರ್ಣಗಳಿಂದ ರಾರಾಜಿಸುತ್ತವೆ. ನಾಟಕ ಮಂಡಳಿಗಳಿಗೆ ಚಿತ್ರ ಪರದೆ ಬಿಡಿಸಿ ಕೊಡುತ್ತಿದ್ದ ಇವರು ಸ್ವತಃ ನಾಟಕ ರಚನೆಯಲ್ಲಿ ತೊಡಗಿ ಹಲವು ನಾಟಕಗಳು ಬರೆದಿದ್ದಾರೆ. ಅವುಗಳೆಂದರೆ, ೧೯೭೫ರಲ್ಲಿ `ತಾಯಿಯ ಆತ್ಮ ಅರ್ಥಾತ್ ಕಂದನ ಗಿಲಿಗಿಲಿ,' ೧೯೭೬ರಲ್ಲಿ `ಸತ್ತವನು ಎದ್ದ' ೧೯೭೮ರಲ್ಲಿ 'ಮಕ್ಕಳು ಸಾಕೋ ಮಹಾದೇವ' ೧೯೮೦ರಲ್ಲಿ 'ಗೆಳೆಯ ಕೊಟ್ಟ ಜ್ಞಾನ' ೧೯೮೧ರಲ್ಲಿ 'ತಾಯಿ ಗಂಡ ಅರ್ಥಾತ್ ದೈವಿ ಮದುವೆ' ೧೯೮೨ರಲ್ಲಿ 'ಕೋಟಿ ವಿದ್ಯೆಗಿಂತಲೂ ಮೇಟಿ ವಿದ್ಯೆ ಮೇಲು. ಅರ್ಥಾತ್ ನೇಗಿಲು ಯೋಗಿ' ೧೯೮೪ರಲ್ಲಿ 'ತಥ್ ! ನೀ ಎಂಥಹ ಗಂಡಸ ರೀ, !' ೧೯೮೫ರಲ್ಲಿ `ರಂಜಾನ ಕಾ ಚಾಂದ,' (ಹಿಂದಿ) ೧೯೮೬ ರಲ್ಲಿ 'ಗಂಗಾ ಬಂದಳು ಹೊಲದಾಗ' ಎಂಬ ಕನ್ನಡ ಹಿಂದಿ ಭಾಷೆಯಲ್ಲಿ ನಾಟಕಗಳನ್ನು ರಚಿಸಿದರೆ, 'ಜಾನಪದ ಪದ್ಯಗಳು' ಎಂಬ ಮೊಹರಮ್ ಪದಗಳು ಬರೆದಿದ್ದಾರೆ. ಮತ್ತು ಉರ್ದುವಿನಲ್ಲಿಯು ಭಜನೆ, ರಿಯಾಯಿತಿಗಳು ಬರೆದ ಇವರು ಕನ್ನಡ, ಹಿಂದಿ, ಉರ್ದು ತ್ರೈಭಾಷಾ ಕವಿಯಾಗಿದ್ದಾರೆ. ಇವರ `ಮಕ್ಕಳು ಸಾಕೋ ಮಹಾದೇವ' ಎಂಬ ನಾಟಕ ೧೯೭೮ರಲ್ಲಿ ಕಲಬುರಗಿ ಆಕಾಶವಾಣಿಯಿಂದ ಜಿ.ಎಂ.ಶಿರಹಟ್ಟಿಯವರ ನಿರ್ದೇಶನದಲ್ಲಿ ಪ್ರಸಾರವಾಗಿದೆ. ಮತ್ತು `ಕೋಟಿಗಿಂತ ಮೇಟಿ ವಿದ್ಯೆ ಮೇಲು' ಎಂಬ ನಾಟಕ ೧೯೮೨ರಲ್ಲಿ ಸರ್ಕಾರಿ ಪ್ರೌಢಶಾಲೆ ಹಳ್ಳಿಖೇಡ (ಬಿ) ಗ್ರಾಮದ ಮಕ್ಕಳೊಂದಿಗೆ ನಾಟಕ ಪ್ರದರ್ಶನವು ಆಗಿದೆ. ಇದು ಶ್ರೀ ರೇಣುಕಾಚಾರ್ಯ ನಾಟ್ಯ ಸಂಘ ಮೈಂದರ್ಗಿಯವರು ಹಲವಾರು ಕಡೆ ಪ್ರದರ್ಶನವು ಮಾಡಿದ್ದಾರೆ. ಆದರೆ ಹಣಕಾಸಿನ ತೊಂದರೆಯಿAದ ಈ ಲೇಖಕರ ಎಲ್ಲ ಕೃತಿಗಳು ಅಪ್ರಕಟಿತವಾಗಿ ಉಳಿದಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ