ಪುಟಗಳು

ಮಂಗಳವಾರ, ಜನವರಿ 14, 2025

ನಾಗೇಂದ್ರ ಎಲ್.ಗಾಯಕವಾಡ

ಉದಯೋನ್ಮುಖ ಕಾದಂಬರಿಕಾರ ನಾಗೇಂದ್ರ ಎಲ್.ಗಾಯಕವಾಡ ರವರು ಬಸವಕಲ್ಯಾಣ ತಾಲೂಕಿನ ಧನ್ನೂರ್ (ಆರ್) ಗ್ರಾಮದ ಲಾಲಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೮೪ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬಡತನದಲ್ಲಿ ಮುಂದೆ ಕಲಿಯಲು ಆಗದೆ ಹೊಲದಲ್ಲಿ ಎತ್ತುಗಳು ಕಾಯುವುದು, ಕೃಷಿ ಕೆಲಸ ಮಾಡುವುದರೊಂದಿಗೆ ಸುಮಾರು ೪೬ಕ್ಕೂ ಹೆಚ್ಚು ಕಾದಂಬರಿಗಳು ಬರೆದಿದ್ದಾರೆ. ಅವುಗಳಲ್ಲಿ ಕೆಲ ಕಾದಂಬರಿಗಳು ರಾಗಸಂಗಮ, ನವರಾಗಸಂಗಮ, ಥ್ರೀಲ್ ಮಾಸಪತ್ರಿಕೆಗಳಲ್ಲಿ `ಖ್ಯಾತ ಕಾದಂಬರಿಕಾರ ನಾಗೇಂದ್ರ ಗಾಯಕವಾಡ’ ಎಂಬ ಮುಖಪುಟದ ಶೀರೊನಾಮೆಯಲ್ಲಿ ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾಗಿ `ನಾ ನಿನ್ನ ಕ್ಷೇಮಿಸಿದ್ದೇನೆ', `ಭ್ರಮೆ', `ಅಮರ ಜ್ಯೋತಿ', `ಪ್ರೇಮ', `ವಿಷಕನ್ಯೆ', `ಸಮಯ', `ವಿಲಕ್ಷಣ', `ರಕ್ತ ದಾಹದ ನಾಗ', `ಸೈಕೊ ಕಿಲ್ಲರ್', `ಅನುರಾಗ ಅಳಿಸದು', `ನನ್ನನ್ನು ಕ್ಷಮಿಸು',. `ಬಾಡಿದ ಹೂ', `ದಡ ಸೇರದ ನೌಕೆ', `ಪವಿತ್ರ', `ಇಂಚರ', `ನಿನ್ನ ಪ್ರೀತಿಗಾಗಿ', `ಕಗ್ಗತ್ತಲೆ ಕರಗಿಸಿದ ಸೂರ್ಯ', `ಮೊಡ ಸರಿದ ರವಿ', `ಭ್ರಮೆ ಬದುಕು', `ವಿಪರ್ಯಾಸ' `ನಿಕೃತಿ', `ತೆರೆ ಮರೆಯ ಹಿಂದೆ'. ಹೀಗೆ ಇವರ ಕಾದಂಬರಿ ಪಟ್ಟಿ ಬಹುದೊಡ್ಡದಿದೆ. ಇಲ್ಲಿಯ ಬಹುತೇಕ ಕಾದಂಬರಿಗಳು ರಾಗ ಸಂಗಮ, ನವರಾಗ ಸಂಗಮ, ಥ್ರೀಲ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಪ್ರಿಯತೆ ಗಳಿಸಿವೆ. ಇವರ `ವಿಷಕನ್ಯೆ' ಮತ್ತು `ಸಮಯ ' ಕಾದಂಬರಿಗಳು ಥ್ರೀಲ್ ಮಾಸಪತ್ರಿಕೆಯ ೧೦೬ನೇ ಸಂಚಿಕೆಯಲ್ಲಿ `ಖ್ಯಾತ ಕಾದಂಬರಿಕಾರ ನಾಗೇಶ ಗಾಯಕವಾಡ ಅವರ ಎರಡು ಕಾದಂಬರಿಗಳು' ಎಂಬ ಶಿರೋನಾಮೆಯಲ್ಲಿ ಪ್ರಕಟವಾಗಿ ಇವರಿಗೆ ಕಾದಂಬರಿಕಾರರಾಗಿ ಹೆಸರು ತರಲು ಕಾರಣವಾಗಿವೆ. ಮತ್ತು ಇವರು ಎರಡು ಕಥಾಸಂಕಲನಗಳು ಹಾಗೂ ಒಂದು ಸತ್ಯ ಘಟಕಗಳ ಕಥಾಸಂಕಲನ ಬರೆದಿದ್ದಾರೆ. ಇಷ್ಟು ಕಾದಂಬರಿ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿ ಪುಸ್ತಕ ಮಾಡದೆ ಹಳ್ಳಿಯಲ್ಲಿ ಉಳಿದ ಇವರು ಎಲೆಮರೆಯ ಬಲಿತ ಕಾಯಿಯಾಗಿ ಕಂಡು ಬರುತ್ತಾರೆ. ಇವರ ಕುರಿತು ೨೦೧೦ರಲ್ಲಿ ಸಂಯುಕ್ತ ಕರ್ನಾಟಕದ ಮುಡಬಿ ವರದಿಗಾರರಾಗಿದ್ದ ಮಚ್ಚೇಂದ್ರ ಪಿ ಅಣಕಲ್ ರವರು `ಕಲ್ಯಾಣ ಕರ್ನಾಟಕ' ಪುರಾವಣಿಯಲ್ಲಿ ವ್ಯಕ್ತಿ ಪರಿಚಯ ಬರೆದಾಗ ಬಸವಕಲ್ಯಾಣ ತಾಲೂಕಿನ ಆಡಳಿತ ಮಂಡಳಿಯವರು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ಬೇಲೂರಿನ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮಿಗಳು ಇವರಿಗೆ ಉರಿಲಿಂಗಪೆದ್ದಿ ಉತ್ಸವದಲ್ಲಿ ಸನ್ಮಾನಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ